ಸವದತ್ತಿ: ರುದ್ರಭೂಮಿಗೆ ಹೋಗಲು ಸಮರ್ಪಕ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ತಾಲ್ಲೂಕಿನ ಕೆಂಚಲಾರಕೊಪ್ಪ ಗ್ರಾಮಸ್ಥರು ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಭಾನುವಾರ ಪ್ರತಿಭಟನೆ ನಡೆಸಿದರು.
‘ಈ ಹಿಂದೆ ಪುರಸಭೆ ಮುಖ್ಯಾಧಿಕಾರಿಗೆ ಹಾಗೂ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೆ ಯಾರೂ ಇತ್ತ ಗಮನಹರಿಸುತ್ತಿಲ್ಲ. ಗ್ರಾಮದಲ್ಲಿ ಯಾರಾದರೂ ಮೃತರಾದರೆ ಸಂಸ್ಕಾರ ನಡೆಸಲು ರುದ್ರಭೂಮಿಗೆ ತೆರಳುವುದಕ್ಕೆ ಸರಿಯಾದ ರಸ್ತೆ ಇಲ್ಲ. ಇದರಿಂದ ಬಹಳ ತೊಂದರೆ ಆಗುತ್ತಿದೆ’ ಎಂದು ತಿಳಿಸಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಪ್ರಶಾಂತ ಪಾಟೀಲ, ‘ನೀವು ಈ ಹಿಂದೆ ನೀಡಿದ ಮನವಿ ಗಮನಕ್ಕೆ ಬಂದಿಲ್ಲ. ಆದಾಗ್ಯೂ ರುದ್ರಭೂಮಿಗೆ ರಸ್ತೆ ನಿರ್ಮಿಸುವಂತೆ ಸಂಬಂಧಿಸಿದಂತೆ ಸೂಚಿಸುತ್ತೇನೆ’ ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಅಂತ್ಯಕ್ರಿಯೆಗಾಗಿ ಶವ ಒಯ್ದರು.
ಅರ್ಜುನ ಅಮ್ಮೋಜಿ, ನಾಗಪ್ಪ ಪರಸನಾಯ್ಕ, ಹನಮಂತ ಇಳಿಗೇರ, ಅಶೋಕ ಪಾಟೀಲ, ಹನಮಂತ ಇರಪನ್ನವರ, ಮಲ್ಲಪ್ಪ ಇರಪನ್ನವರ, ಮಲ್ಲಪ್ಪ ಪರಸನಾಯ್ಕ, ಮಹಾಂತೇಶ ನಾಗಪ್ಪನವರ ಇದ್ದರು.
‘ಸರಿಯಾದ ದಾರಿ ಇಲ್ಲದೆ ಸ್ಥಳೀಯರಿಗೆ ತೊಂದರೆ ಆಗಿರುವುದು ನಿಜ. ಮಳೆ ಮತ್ತು ಕೋವಿಡ್ನಿಂದಾಗಿ ಕೆಲಸಗಳು ಸ್ಥಗಿತವಾಗಿ ಬಿಲ್ ಪಾವತಿಗೂ ತೊಂದರೆಯಾಗಿದೆ. ಜಾಕ್ವೆಲ್ಗೆ ಹೋಗುವ ರಸ್ತೆ ಜೊತೆಗೆ ಮತ್ತೊಂದು ರಸ್ತೆ ನಿರ್ಮಿಸಲು ಯೋಚಿಸಲಾಗಿದೆ. ಹೆಚ್ಚಿನ ಅನುದಾನ ಒದಗಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ. ಗ್ರಾಮಸ್ಥರು ಸಹಕರಿಸಬೇಕು’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.