ಖಾನಾಪುರ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ತಾಲ್ಲೂಕಿಗೆ ₹100 ಕೋಟಿ ಮೊತ್ತದ ಅನುದಾನ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ಅನುದಾನದಡಿ ತಾಲ್ಲೂಕಿನಾದ್ಯಂತ ಹಲವಾರು ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿವೆ’ ಎಂದು ಶಾಸಕ ವಿಠ್ಠಲ ಹಲಗೇಕರ ವಿವರಿಸಿದರು.
ಪಟ್ಟಣದ ಗೋವಾ ಕ್ರಾಸ್ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ತಾಲ್ಲೂಕಿನ ಘಷ್ಟೊಳ್ಳಿ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮತ್ತು ಖಾನಾಪುರ–ಗುಂಜಿಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರಾಗಿವೆ. ರಾಜ್ಯ ಸರ್ಕಾರದಿಂದ ₹25 ಕೋಟಿ ವಿಶೇಷ ಅನುದಾನ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ₹6 ಕೋಟಿ ಅನುದಾನ, ವಿವಿಧೆಡೆ ಸೇತುವೆ ನಿರ್ಮಿಸಲು ನಬಾರ್ಡ್ ಯೋಜನೆಯಡಿ ₹10 ಕೋಟಿ ಅನುದಾನ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಂದ ಸೇತುವೆಗಾಗಿ ₹10 ಕೋಟಿ ಅನುದಾನ, ಹಣಮಂತ ನಿರಾಣಿ ಅವರಿಂದ ₹2.50 ಕೋಟಿ ಅನುದಾನ, ಪಂಚಾಯತ್–ರಾಜ್ ಎಂಜಿನಿಯರಿಂಗ್ ವಿಭಾಗದಿಂದ ₹10 ಕೋಟಿ ಅನುದಾನ, ಕೇಂದ್ರದ ಪ್ರಗತಿಪಥ ಯೋಜನೆಯಡಿ 22 ಕಿಮೀ ರಸ್ತೆ ಅಭಿವೃದ್ಧಿಗೆ ಅನುದಾನ, ಖಾನಾಪುರ ರೈಲು ನಿಲ್ದಾಣ ಅಭಿವೃದ್ಧಿ, ಸ್ಟೇಶನ್ ರಸ್ತೆ ಅಭಿವೃದ್ಧಿ, ನಗರೋತ್ಥಾನ ಯೋಜನೆಯಡಿ ಖಾನಾಪುರ ಪಟ್ಟದಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಹಾಗೂ ಮುಖ್ಯವಾಗಿ ಪಟ್ಟಣದ ಹೊರವಲಯದ ಗೋವಾ ಕ್ರಾಸ್ದಿಂದ ಮರಾಠಾ ಮಂಡಳ ಕಾಲೇಜ್ ವರೆಗಿನ 4.80 ಕಿ.ಮೀ. ರಸ್ತೆಯ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹13.95 ಕೋಟಿ ಅನುದಾನ ದೊರೆತಿದೆ’ ಎಂದು ಮಾಹಿತಿ ನೀಡಿದರು.
ಪಕ್ಷದ ಬ್ಲಾಕ್ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಬಿಜೆಪಿ ಮುಖಂಡರಾದ ಸದಾನಂದ ಪಾಟೀಲ, ಅಪ್ಪಯ್ಯ ಕೋಡೊಳಿ, ಜಾರ್ಡನ್ ಗೋನ್ಸಾಲ್ವಿಸ್, ಪಂಡಿತ ಓಗಲೆ, ಸಂಜಯ ಕುಬಲ, ಚೇತನ ಮನೇರಿಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.