
ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮದ ವಿರಕ್ತಮಠದಲ್ಲಿ ಗೋಶಾಲೆ ನಿರ್ಮಾಣ ಮತ್ತು ಮಠದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡುವಂತೆ ಮಠದ ಉತ್ತರಾಧಿಕಾರಿ ಚನ್ನವೀರದೇವರು ಅವರು ಡಿಸಿ ಮೊಹಮ್ಮದ ರೋಷನ್ ಅವರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಶ್ರೀಗಳು, ’ನಂದಗಡ ವಿರಕ್ತಮಠಕ್ಕೆ ಶತಮಾನಗಳ ಇತಿಹಾಸವಿದೆ. ಈ ಮಠಕ್ಕೆ ಅಸಂಖ್ಯಾತ ಭಕ್ತರಿದ್ದಾರೆ. ಮಠದಲ್ಲಿ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ-ಪುನಸ್ಕಾರ, ಸತ್ಸಂಗಗಳು ನಡೆಯುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ಮಠದ ಕಟ್ಟಡ ಶಿಥಿಲಗೊಂಡಿದ್ದು, ಭಕ್ತರು ಮತ್ತು ಸರ್ಕಾರದ ಸಹಯೋಗದಲ್ಲಿ ಕಟ್ಟಡವನ್ನು ಜೀರ್ಣೋದ್ಧಾರಗೊಳಿಸಬೇಕು ಮತ್ತು ಮಠದಲ್ಲಿ ಒಂದು ಸುಸಜ್ಜಿತ ಗೋಶಾಲೆ ಆರಂಭಿಸಬೇಕು ಎಂಬ ಉದ್ದೇಶವಿದೆ. ಹೀಗಾಗಿ ಸರ್ಕಾರದಿಂದ ಮಠಕ್ಕೆ ಅಗತ್ಯ ಸಹಾಯ-ಸಹಕಾರ ಒದಗಿಸಬೇಕು ಎಂದು ಕೋರಿದರು.
ನಂದಗಡ ಗ್ರಾಮದ ಮುಖಂಡರಾದ ಮಹಾಂತೇಶ ವಾಲಿ, ಮೋರೇಶ್ವರ ಮುನವಳ್ಳಿ, ಪ್ರಕಾಶ ಗುಡಿ, ರಾಜು ಜೋಡಂಗಿ, ಖಾನಾಪುರದ ಭಕ್ತರಾದ ಅಪ್ಪಯ್ಯ ಕೋಡೊಳಿ, ರವಿ ಕಾಡಗಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.