ADVERTISEMENT

ಕೆವಿಕೆಯಿಂದ ರೈತರಿಗೆ ಬಹಳ ಅನುಕೂಲ’

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಲಹಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 8:05 IST
Last Updated 12 ನವೆಂಬರ್ 2020, 8:05 IST
ಬೆಳಗಾವಿ ಜಿಲ್ಲೆಯ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ 6ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದವರು ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದರು
ಬೆಳಗಾವಿ ಜಿಲ್ಲೆಯ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ 6ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದವರು ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದರು   

ಬೆಳಗಾವಿ: ‘ಕೃಷಿ ವಿಜ್ಞಾನ ಕೇಂದ್ರವು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಕಡಿಮೆ ಅವಧಿಯಲ್ಲಿಯೇ ಹೆಚ್ಚು ರೈತರಿಗೆ ತಾಂತ್ರಿಕ ಮಾಹಿತಿ ತಲುಪಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಕೇಂದ್ರದ ಕಾರ್ಯಾಧ್ಯಕ್ಷ ಹಾಗೂ ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಬಿ.ಆರ್. ಪಾಟೀಲ ಹೇಳಿದರು.

ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ನಡೆದ 6ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಮಿತಿ ಸದಸ್ಯರ ಸಲಹೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದೆ’ ಎಂದರು.

ADVERTISEMENT

ಕೇಂದ್ರದ ಸಲಹೆಗಾರ ಡಾ.ವಿ.ಎಸ್. ಕೋರಿಕಂಥಿಮಠ, ‘ಎಂಟು ವರ್ಷಗಳ ಹಿಂದೆ ಪ್ರಾರಂಭವಾದ ಕೃಷಿ ವಿಜ್ಞಾನ ಕೇಂದ್ರವು ಸುಸಜ್ಜಿತ ಕಟ್ಟಡ, ಮಣ್ಣು ಪರೀಕ್ಷೆ ಪ್ರಯೋಗಾಲಯ, ಸಸ್ಯ ಆರೋಗ್ಯ ಚಿಕಿತ್ಸಾಲಯ, ಬೀಜ ಸಂಸ್ಕರಣಾ ಘಟಕ, ತೋಟಗಾರಿಕೆ ಸಸ್ಯೋತ್ಪಾದನೆ, ಹೈನುಗಾರಿಕೆ ಘಟಕಗಳನ್ನು ಹೊಂದಿದೆ. ರೈತರಿಗೆ ಮಣ್ಣು ಪರೀಕ್ಷೆ ಸೇವೆ ನೀಡುತ್ತಿದೆ. ಅಧಿಕ ಇಳುವರಿ ನೀಡುವ ಹೆಸರು ಹಾಗೂ ಕಡಲೆ ಬೆಳೆಯ ತಳಿಗಳನ್ನು ಪೂರೈಸಲಾಗುತ್ತಿದೆ. ಸಸ್ಯ ರೋಗ, ಕೀಟ ನಿರ್ವಹಣೆ, ಹೈನುಗಾರಿಕೆ, ಮಹಿಳಾ ಸ್ವ ಸಹಾಯ ಸಂಘಗಳಿಗೆ ಪೌಷ್ಟಿಕ ಆಹಾರ, ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಕೆಎಲ್‌ಇ ಸಂಸ್ಥೆ ನಿರ್ದೇಶಕ ವೈ.ಎಸ್. ಪಾಟೀಲ, ‘ಕೇಂದ್ರವು ಉತ್ತಮ ಕೆಲಸ ಮಾಡುತ್ತಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ವಿಜ್ಞಾನಿಗಳು ರೈತರೊಂದಿಗೆ ಸಮಾಲೋಚಿಸಿ ಮತ್ತಷ್ಟು ಉತ್ತಮ ಯೋಜನೆಗಳನ್ನು ರೂಪಿಸಬೇಕು’ ಎಂದು ಸಲಹೆ ನೀಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಪಿ.ಎಸ್. ಹೂಗಾರ, ಕ್ರಿಯಾಯೋಜನೆ ಅಂತಿಮಗೊಳಿಸಿದರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಪ್ರಧಾನ ವಿಜ್ಞಾನಿ ಡಾ.ಬಿ.ಟಿ. ರಾಯುಡು, ಮುಖ್ಯ ತಾಂತ್ರಿಕ ಅಧಿಕಾರಿ ಮಲ್ಲಿಕಾರ್ಜುನ ಹಂಜಿ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ರಮೇಶ ಬಾಬು, ಕೆವಿಕೆ ನೋಡಲ್ ಅಧಿಕಾರಿ ಡಾ.ಶ್ರೀಪಾದ ಕುಲಕರ್ಣಿ, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ವೈ.ಕೆ. ಕೋಟಿಕಲ್ ಗೂಗಲ್ ಮೀಟ್‌ನಲ್ಲಿ ಪಾಲ್ಗೊಂಡರು.

ಸಮಿತಿಯ ರೈತ ಸದಸ್ಯರು, ಆಹ್ವಾನಿತರಾದ ಎನ್.ಐ. ದೇಸಾಯಿ, ಅಜ್ಜಪ್ಪ ಕುಲಗೋಡ, ಅಕ್ಕಮಹಾದೇವಿ ಅಪ್ಪಯ್ಯನವರಮಠ, ವಿಜ್ಞಾನಿಗಳಾದ ಜಿ.ಬಿ. ವಿಶ್ವನಾಥ, ಡಾ.ಎಸ್.ಎಸ್. ಹಿರೇಮಠ, ಪ್ರವೀಣ ಯಡಹಳ್ಳಿ, ಡಾ.ನಾಗೇಶ ಹುಯಿಲಗೋಳ, ತಾಂತ್ರಿಕ ಅಧಿಕಾರಿಗಳಾದ ಶಂಕರಗೌಡ ಪಾಟೀಲ, ಮಂಜುನಾಥ ಪಿ.ಐ., ವಿನೋದಾ ಎಂ. ಕೋಚಿ ಪಾಲ್ಗೊಂಡಿದ್ದರು.

ಕೇಂದ್ರದ ಮುಖ್ಯಸ್ಥೆ ಶ್ರೀದೇವಿ ಬಿ. ಅಂಗಡಿ ಸ್ವಾಗತಿಸಿದರು. ವಿಜ್ಞಾನಿ ಎಸ್.ಎಂ. ವಾರದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.