ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ 58ನೇ ವಾರ್ಡ್ನ ದೇವರಾಜ ಅರಸು ಬಡಾವಣೆ (1991ರ ಸ್ಕೀಂ ಯೋಜನೆ 11/ಬಿ) ಕನಿಷ್ಠ ಮೂಲ ಸೌಲಭ್ಯಗಳಿಲ್ಲದೆ ಬಳಲುತ್ತಿದ್ದು, ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ.
‘ಇಲ್ಲಿ 29 ವರ್ಷಗಳಿಂದ ಹಲವು ಮನೆಗಳು ನಿರ್ಮಾಣಗೊಂಡಿದ್ದರೂ ಅಗತ್ಯವಾದ ರಸ್ತೆ, ಚರಂಡಿ ಮೊದಲಾದ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ಬುಡಾದಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಯಾವುದೇ ಅಭಿವೃದ್ಧಿಯನ್ನೂ ಮಾಡದೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. ಇದರಿಂದ ನಾವು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ’ ಎಂದು ನಿವಾಸಿಗಳಾದ ಎಂ.ಐ. ಬೋರಣ್ಣವರ, ವಿ.ಬಿ. ಸಣಪೂಜಿ, ಎ.ಎಸ್. ಬಾಗೇವಾಡಿ, ಆರೀಫ್ ಎಚ್. ಬಿರಾದಾರ, ರಾಜಲಕ್ಷ್ಮಿ ಸದಾಶಿವ ಕಿತ್ತೂರ, ಮೀನಾಕ್ಷಿ ತೊಗರಿ, ವಿರೂಪಾಕ್ಷಿ ಯರಗಂಬಳಿಮಠ, ಚಂದ್ರಕಾಂತ ಕುಲಕರ್ಣಿ, ಡಾ.ಮಹೇಶ ಗುರನಗೌಡರ, ಶಾಂತಕುಮಾರ ಅತೋಡೆ, ಪ್ರಭು ಚಂದ್ರರಗಿರಿಮಠ ಮೊದಲಾದವರು ದೂರಿದ್ದಾರೆ.
‘ಇಲ್ಲಿಂದ ಆಯ್ಕೆಯಾದ ನಗರಪಾಲಿಕೆ ಸದಸ್ಯರು ಬಡಾವಣೆಯ ಪ್ರಗತಿಗೆ ಮುಂದಾಗಲಿಲ್ಲ. ಈ ಭಾಗದ ಶಾಸಕರು ಕಣ್ಣೆತ್ತಿಯೂ ನೋಡಲಿಲ್ಲ; ಸ್ಪಂದಿಸಲಿಲ್ಲ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮುಂದುವರಿದಿದೆ. ಪ್ರತಿ ವರ್ಷ ನಾಗರಿಕರು ಸಾವಿರಾರು ರೂಪಾಯಿ ಮನೆ ತೆರಿಗೆಯನ್ನು, ಅಭಿವೃದ್ಧಿ ಶುಲ್ಕಗಳನ್ನು ಪಾವತಿಸಿದ್ದರೂ, ನೂರೆಂಟು ಸಲ ಮನವಿ ಮಾಡಿ ಬೇಡಿಕೊಂಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ತಿಳಿಸಿದ್ದಾರೆ.
‘ಇತ್ತ ಹಿರಿಯ ಅಧಿಕಾರಿಗಳು ಗಮನಹರಿಸಬೇಕು. ಕೂಡಲೇ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.