ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಯಾವ ಸಿ.ಡಿ.ನೂ ಇಲ್ಲ, ಗೀಡಿನೂ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದರು.
ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮುಖ್ಯಮಂತ್ರಿ ವಿರುದ್ಧ ಮಾಡಿರುವ ಆರೋಪಗಳ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
‘ಸಚಿವ ಸಂಪುಟ ವಿಸ್ತರಣೆಯಾದಾಗ ಎಲ್ಲ ಪಕ್ಷದಲ್ಲೂ ಭಿನ್ನಮತ ಅಥವಾ ಅಸಮಾಧಾನ ಸಹಜ. ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲವೋ ಅವರಿಗೆ ಬೇಸರ ಆಗಿರುತ್ತದೆ. ಹೀಗಾಗಿ ಅಸಮಾಧಾನ ಹೊರಹಾಕುತ್ತಾರೆ. ಇದು ಬಿಜೆಪಿ ಕುಟುಂಬದ ಮಧ್ಯದಲ್ಲಿರುವ ಅಸಮಾಧಾನ. ಅದೆಲ್ಲವೂ ಮುಂದಿನ ದಿನಗಳಲ್ಲಿ ಸರಿ ಹೋಗಲಿದೆ’ ಎಂದರು.
‘ಪಕ್ಷದಲ್ಲಿ ನೋವು ತೋಡಿಕೊಳ್ಳಲು ಮುಕ್ತ ಅವಕಾಶವಿದೆ. ನಮ್ಮ ನಾಯಕರೊಂದಿಗೆ ನೋವು ಹೇಳಿಕೊಳ್ಳದೆ ಇನ್ಯಾರಿಗೆ ಹೇಳಬೇಕು. ಅಸಮಾಧಾನಿತ ಶಾಸಕರು ನನ್ನ ಸಂಪರ್ಕಕ್ಕೆ ಬಂದಿಲ್ಲ. ಕಾದು ನೋಡೋಣ’ ಎಂದು ಹೇಳಿದರು.
ಅಮಿತ್ ಶಾ ಕಾರ್ಯಕ್ರಮ:‘ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಜ. 16ರಂದು ಬೆಂಗಳೂರಿಗೆ ಬಂದು ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಭದ್ರಾವತಿಗೆ ಹೋಗಿ ಬೆಂಗಳೂರಿಗೆ ಮರಳಿ ವಾಸ್ತವ್ಯ ಹೂಡುವರು. ಜ.17ರಂದು ಬೆಳಿಗ್ಗೆ 10.30ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಬಾಗಲಕೋಟೆಗೆ ತೆರಳುವರು. ಮಧ್ಯಾಹ್ನ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಪಕ್ಷ ಆಯೋಜಿಸಿರುವ ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ಬಳಿಕ ಬಿಜೆಪಿ ಸಮನ್ವಯ ಸಮಿತಿ ಸಭೆ ನಡೆಸುವರು. ದಿವಂಗತ ಸುರೇಶ ಅಂಗಡಿ ಅವರ ನಿವಾಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳುವರು. ಸಂಜೆ ಅಧಿಕಾರಿಗಳ ಸಭೆ ನಡೆಸಿ ದೆಹಲಿಗೆ ಮರಳುವರು’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.