ಬೆಳಗಾವಿ: ತಾಲ್ಲೂಕಿನ ಹಿಂಡಲಗಾ ಗ್ರಾಮದಲ್ಲಿ ಗ್ರಾಮದೇವತೆ ಮಹಾಲಕ್ಷ್ಮೀದೇವಿ ಜಾತ್ರೆಗೆ ಮಂಗಳವಾರ ಸಂಭ್ರಮದ ಚಾಲನೆ ದೊರೆಯಿತು.
ರು ವರ್ಷಗಳ ನಂತರ ಬಂದಿರುವ ಜಾತ್ರೆಗೆ ಇಡೀ ಗ್ರಾಮವೇ ಸಿಂಗಾರಗೊಂಡಿದೆ. ಹೋದ ವರ್ಷ ನಿಗದಿಯಾಗಿದ್ದ ಮಹೋತ್ಸವವನ್ನು ಕೋವಿಡ್–19 ಕಾರಣದಿಂದ ಮುಂದೂಡಲಾಗಿತ್ತು. ಮಂಗಳವಾರ ಆರಂಭವಾಗಿರುವ ಜಾತ್ರೆಯು ಮಾರ್ಚ್ 20ರವರೆಗೆ ನಡೆಯಲಿದೆ. ಮೊದಲ ದಿನ ತೇರೆಳೆಯುವ ಕಾರ್ಯಕ್ರಮವಿತ್ತು. ಸಾವಿರಾರು ಮಂದಿ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ತೇರು ಸಾಗಿದ ಮಾರ್ಗದುದ್ದಕ್ಕೂ ಭಂಡಾರ ತುಂಬಿಕೊಂಡಿತ್ತು. ಭಕ್ತರು ಜಯ ಘೋಷಗಳೊಂದಿಗೆ ತೇರನೆಳೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಕೋವಿಡ್ 2ನೇ ಅಲೆಯ ಭೀತಿಯನ್ನೂ ಲೆಕ್ಕಸಿದೆ ಜನರು ಪಾಲ್ಗೊಂಡಿದ್ದರು.
ಬೆಳಿಗ್ಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.
ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ತೇರೆಳೆಯುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ವಿಧಿವಿಧಾನದಂತೆ ಲಕ್ಷ್ಮೀದೇವಿಯ ವಿವಾಹ ಕಾರ್ಯಕ್ರಮ ಮೊದಲಾದವನ್ನು ನೆರವೇರಿಸಲಾಯಿತು.
ಕುಡಿಯುವ ನೀರಿನ ವ್ಯವಸ್ಥೆ:
ಹಿಂಡಲಗಾ ಗ್ರಾಮದಲ್ಲಿ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ನೀರಿನ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಶಾಸಕಿ ಲಕ್ಷ್ಮಿ ತಮ್ಮ ಲಕ್ಷ್ಮಿ ತಾಯಿ ಪ್ರತಿಷ್ಠಾನದಿಂದ ಟ್ಯಾಂಕರ್ಗಳ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿದ್ದಾರೆ.
ಹಿಂಡಲಗಾ ಗಣೇಶ ಮಂದಿರದಿಂದ ಬಾಕ್ಸೈಟ್ ರಸ್ತೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ, ಸೈಕಲ್ ಟ್ರ್ಯಾಕ್ ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪ್ರಗತಿಯಲ್ಲಿದ್ದು, ಶಾಸಕರು ಮಂಗಳವಾರ ಪರಿಶೀಲಿಸಿದರು.
‘ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.