ADVERTISEMENT

ಬೆಳಗಾವಿಯಲ್ಲಿ ಕಾರ್ಮಿಕನ ಮೇಲೆ ಚಿರತೆ ದಾಳಿ: ಹೃದಯಾಘಾತದಿಂದ ತಾಯಿ ಸಾವು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 14:03 IST
Last Updated 5 ಆಗಸ್ಟ್ 2022, 14:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಇಲ್ಲಿನ ಜಾಧವನಗರ ಜನವಸತಿ ಪ್ರದೇಶದಲ್ಲೇ ಶುಕ್ರವಾರ ಮಧ್ಯಾಹ್ನ ಕಟ್ಟಡ ಕಾರ್ಮಿಕರೊಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ಕಾರ್ಮಿಕ ಪ್ರಾಣಾಪಾಯದಿಂದ ‍ಪಾರಾಗಿದ್ದಾರೆ. ಆದರೆ, ಅವರ ತಾಯಿ ಹೃದಯಾಘಾತವಾಗಿ ಮೃತಪಟ್ಟರು.

ತಾಲ್ಲೂಕಿನ ಖನಗಾವ ಗ್ರಾಮದ ಸಿದರಾಯಿ ಲಕ್ಷ್ಮಣ ನಿಲಜಕರ್‌(38) ಅವರಿಗೆ ಚಿರತೆ ದಾಳಿಯಿಂದ ಚಿಕ್ಕ ಗಾಯವಾಗಿದೆ. ಆದರೆ, ಪುತ್ರನ ಮೇಲೆ ಚಿರತೆ ದಾಳಿ ಮಾಡಿದ ಎಂಬ ಸುದ್ದಿ ಕೇಳಿದ ಅವರ ತಾಯಿ ಶಾಂತಾ ನಿಲಜಕರ್‌(65) ಮನೆಯಲ್ಲಿ ಕುಸಿದುಬಿದ್ದರು. ತಪಾಸಣೆ ನಡೆಸಿದ ವೈದ್ಯರು ಅವರು ಕೊನೆಯುಸಿರೆಳೆದಿರುವುದಾಗಿ ತಿಳಿಸಿದರು.

ನಗರಕ್ಕೇ ನುಗ್ಗಿದ ಚಿರತೆ: ಜಾಧವ ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದವರ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿತು. ಬೆಚ್ಚಿಬಿದ್ದ ಕಾರ್ಮಿಕರು ಚೀರಾಡಿದ್ದರಿಂದ ಗಿಡಗಂಟಿಗಳ ಪೊದೆಯಲ್ಲಿ ಅವಿತುಕೊಂಡಿತು. ಈ ದೃಶ್ಯಗಳು ಸಿಸಿಟಿವಿ ‌ಕ್ಯಾಮೆರಾದಲ್ಲಿ ಸೆರೆಯಾಗಿವೆ.

ADVERTISEMENT

ಜನದಟ್ಟಣೆಯ ಪ್ರದೇಶಕ್ಕೇ ಚಿರತೆ ಬಂದಿದ್ದರಿಂದ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಸಿಬ್ಬಂದು ಮೊಕ್ಕಾಂ ಹೂಡಿದ್ದಾರೆ. ಚಿರತೆ ಸೆರೆಗೆ ಗದಗನಿಂದ ಪರಿಣತರ ತಂಡವನ್ನು ಕರೆಸಲಾಗಿದೆ. ಡ್ರೋನ್‌ ಕ್ಯಾಮೆರಾದಿಂದ ಚಿರತೆ ಚಲನ– ವಲನಗಳ ಮೇಲೆ ಕಣ್ಣಿಡಲಾಗಿದೆ.

ಆದರೆ, ಚಿರತೆ ಯಾವ ಕಡೆಯಿಂದ ನಗರಕ್ಕೆ ಬಂದು ಸೇರಿದೆ ಎಂಬುದು ಖಚಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.