ADVERTISEMENT

ಬೆಳಗಾವಿಯಲ್ಲಿ ​​​​​​​ಇನ್ನೂ ಪತ್ತೆಯಾಗದ ಚಿರತೆ: ಹೊರಗೆ ಬಾರದ ಜನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 7:44 IST
Last Updated 6 ಆಗಸ್ಟ್ 2022, 7:44 IST
ಬೆಳಗಾವಿಯ ಹನುಮಾನ್ ನಗರದ ಮುಖ್ಯರಸ್ತೆ ಶನಿವಾರ ನಿರ್ಜನವಾಗಿತ್ತು
ಬೆಳಗಾವಿಯ ಹನುಮಾನ್ ನಗರದ ಮುಖ್ಯರಸ್ತೆ ಶನಿವಾರ ನಿರ್ಜನವಾಗಿತ್ತು   

ಬೆಳಗಾವಿ: ನಗರದ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ನುಗ್ಗಿದ ಚಿರತೆ 24 ತಾಸುಗಳ ನಂತರವೂ ಸೆರೆ ಸಿಕ್ಕಿಲ್ಲ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ನಿರಂತರ ಶೋಧ ನಡೆಸಿದ್ದಾರೆ.

ಇನ್ನೊಂದೆಡೆ, ಚಿರತೆ ಭಯದಿಂದಾಗಿ ಈ ಪ್ರದೇಶದಲ್ಲಿ ಜನರು ಮನೆಯಿಂದ ಹೊರಬಂದಿಲ್ಲ. ಪ್ರತಿ ದಿನ ವಾಯು ವಿಹಾರಿಗಳಿಂದ ತುಂಬಿರುತ್ತಿದ್ದ ಇಲ್ಲಿನ ಜಾಧವ ನಗರ, ಹನುಮಾನ್ನಗರ, ಸಹ್ಯಾದ್ರಿ ನಗರ, ಟಿ.ವಿ ಸೆಂಟರ್ ಮುಂತಾದ ಪ್ರದೇಶದ ರಸ್ತೆಗಳು ಶನಿವಾರ ಬೆಳಿಗ್ಗೆ ಬಿಕೋ ಎನ್ನುತ್ತಿದ್ದವು.

ಶಾಲೆ, ಕಾಲೇಜಿಗೆ ಹೋಗುವವರು, ಕಚೇರಿ ಕೆಲಸ, ವ್ಯಾಪಾರ ಅನಿವಾರ್ಯ ಇದ್ದವರು ಅಲ್ಲಿಲ್ಲಿ ಕಾಣಿಸಿದರು.

ADVERTISEMENT

ಚಿರತೆ ಸೆರೆ ಸಿಗುವವರೆಗೂ ಜನ ಎಚ್ಚರಿಕೆಯಿಂದ ಇರಬೇಕು, ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ಹೋಗಬಾರದು, ಮಕ್ಕಳನ್ನೂ ಹೊರಗೆ ಬಿಡಬಾರದು, ಒಂಟಿಯಾಗಿ ಪೊದೆಗಳ ಹತ್ತಿರ ಓಡಾಡಬಾರದು ಎಂದು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸುತ್ತಲಿನ ಪ್ರದೇಶಗಳಲ್ಲಿ ಪಹರೆ ಮುಂದುವರಿಸಲಾಗಿದೆ. ಜನ- ವಾಹನ ಸಂಚಾರ ವಿರಳವಾಗಿದೆ. ಪೊದೆಗಳು ಹೆಚ್ಚು ಇರುವ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಶನಿವಾರವೂ ಹುಡುಕಾಟ ಮುಂದುವರಿದಿದೆ. ಬೆಳಿಗ್ಗೆ ಆಟೊ ನಗರದಲ್ಲಿ ಬೈಕ್ ಮೇಲೆ ಹೊರಟಿದ್ದ ವ್ಯಕ್ತಿಗೆ ಚಿರತೆ ಕಂಡಿದೆ ಎಂದು ಹೇಳಿದ್ದರೂ ಖಚಿತವಾಗಿಲ್ಲ. ಈ ಜಾಗದಲ್ಲಿ ಎಲ್ಲಿಯೂ ಹೆಜ್ಜೆ ಗುರುತುಗಳೂ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.