ADVERTISEMENT

ಸತ್ಯಂಪೇಟ ಮೇಲಿನ ಪ್ರಕರಣ ರದ್ದುಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 9:35 IST
Last Updated 31 ಜುಲೈ 2020, 9:35 IST
ಕಲಬುರ್ಗಿಯ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ ಅವರ ಮೇಲಿನ ಪ್ರಕರಣ ರದ್ದುಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಬಸವಪರ ಸಂಘಟನೆಗಳ ಮುಖಂಡರು  ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಮನವಿ ಸಲ್ಲಿಸಿದರು
ಕಲಬುರ್ಗಿಯ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ ಅವರ ಮೇಲಿನ ಪ್ರಕರಣ ರದ್ದುಪಡಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಬಸವಪರ ಸಂಘಟನೆಗಳ ಮುಖಂಡರು  ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಮನವಿ ಸಲ್ಲಿಸಿದರು   

ಬೆಳಗಾವಿ: ‘ಕಲಬುರ್ಗಿ ಜಿಲ್ಲೆಯ ಶಹಾಪುರದ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ ಅವರ ಮೇಲೆ ದಾಖಲಿಸಲಾದ ಪ್ರಕರಣವನ್ನು ತಕ್ಷಣ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವ ಸೇನೆ ಹಾಗೂ ಬಸವಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ‘ಅನುಭವಿ ಪತ್ರಕರ್ತ, ವೈಚಾರಿಕ ಚಿಂತಕ ಹಾಗೂ ಶರಣ ಸಾಹಿತಿ ವಿಶ್ವರಾಧ್ಯ ಅವರ ಮೇಲೆ ದುರುದ್ದೇಶದಿಂದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ದೂರಿದರು.

‘ಜಾಗತಿಕ ಲಿಂಗಾಯತ ಮಹಾಸಭೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆಗಿರುವ ಸತ್ಯಂಪೇಟ ತಮ್ಮ ಪ್ರಗತಿಪರ ಚಿಂತನೆಗಳ ಮೂಲಕ ನಾಡಿನಾದ್ಯಂತ ಬಸವ ತತ್ವಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಹಲವಾರು ಮಹತ್ವದ ಪುಸ್ತಕಗಳನ್ನು ರಚಿಸಿದ್ದಾರೆ. ಬಸವ ಮಾರ್ಗ ಎಂಬ ಜಾಲತಾಣದ ಮೂಲಕ ಶರಣರ ತತ್ವ ಪ್ರಚಾರ ಮಾಡುತಿದ್ದಾರೆ. ವೈಚಾರಿಕ ಲೇಖನಗಳಿಂದಾಗಿ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೊನ್ನಾಳಿಯ ಸ್ವಾಮೀಜಿ ಒಬ್ಬರ ಬಗ್ಗೆ ಬರೆದ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಲೇಖನವನ್ನು ನೆಪವಾಗಿಟ್ಟುಕೊಂಡು ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿ ಮಧ್ಯಪ್ರವೇಶಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ, ‘ತಕ್ಷಣ ಪ್ರಕರಣ ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಆನಂದ ಕರ್ಕಿ, ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ, ಲಿಂಗಾಯತ ಸೇವಾ ಸಮಿತಿಯ ರಾಜು ಕುಂದಗೋಳ, ಸಿದ್ದರಾಮ ಸಾವಳಗಿ, ವಿ.ಕೆ. ಪಾಟೀಲ, ರಾಜಶ್ರೀ ದಯನ್ನವರ, ಶಿವಯೋಗಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.