ADVERTISEMENT

ಲೋಕಾಪೂರ- ಧಾರವಾಡದ ರೈಲ್ವೆ ಮಾರ್ಗಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 1:59 IST
Last Updated 18 ಜುಲೈ 2025, 1:59 IST
ರಾಮದುರ್ಗದ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಹುಬ್ಬಳ್ಳಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರನ್ನು ಭೇಟಿ ಮಾಡಿ ಲೋಕಾಪೂರ–ಧಾರವಾಡ ರೈಲ್ವೆ ಮಾರ್ಗದ ಸಮೀಕ್ಷೆ ನಡೆಸಲು ಮನವಿ ಮಾಡಿದರು
ರಾಮದುರ್ಗದ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಹುಬ್ಬಳ್ಳಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರನ್ನು ಭೇಟಿ ಮಾಡಿ ಲೋಕಾಪೂರ–ಧಾರವಾಡ ರೈಲ್ವೆ ಮಾರ್ಗದ ಸಮೀಕ್ಷೆ ನಡೆಸಲು ಮನವಿ ಮಾಡಿದರು   

ರಾಮದುರ್ಗ: ಲೋಕಾಪೂರದಿಂದ ರಾಮದುರ್ಗಕ್ಕೆ ರೈಲ್ವೆ ಮಾರ್ಗ ಆಗಬೇಕು ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ರಾಮದುರ್ಗ ತಾಲ್ಲೂಕು ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಸಮಿತಿಯಿಂದ ಮನವಿ ಸಲ್ಲಿಸಿ ಕೇಂದ್ರ ಸಚಿವರ ನಿರ್ದೇಶನದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ಲೋಕಾಪೂರ–ಧಾರವಾಡ ರೈಲ್ವೆ ಯೋಜನೆಗಳನ್ನು ಜಾರಿಗೆ ತರಬೇಕು. 20 ವರ್ಷಗಳಿಂದ ಹೋರಾಟ ನಡೆದು ಬಾಗಲಕೋಟದಿಂದ ಕುಡಚಿಯವರೆಗೆ ರೈಲ್ವೆ ಮಾರ್ಗ ಮಂಜೂರಾಗಿದೆ. ಇದೇ ಯೋಜನೆಯನ್ನು ವಿಸ್ತರಿಸಿ ಲೋಕಾಪೂರ–ಧಾರವಾಡ ರೈಲು ಮಾರ್ಗ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ರಾಮದುರ್ಗ ಜನತೆಯ ಹೋರಾಟದ ಭಾಗವಾಗಿ 2019ರಲ್ಲಿ ಸರ್ವೆಯೂ ನಡೆದಿದೆ. ಆದರೆ ಆ ಸಮದಯಲ್ಲಿ ಕೋವಿಡ್ ಕಾರಣದಿಂದ ಸಮೀಕ್ಷೆ ಸರಿಯಾಗಿ ನಡೆದಿಲ್ಲ. 2024ರ ನವೆಂಬರ್‌ನಲ್ಲಿ ಬೃಹತ್ ಹೋರಾಟ ನಡೆಸಿ ಬೆಳಗಾವಿ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಕೇಂದ್ರ-ರಾಜ್ಯ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಬೆಳಗಾವಿ ಕ್ಷೇತ್ರದ ಸಂಸದ ಜಗದೀಶ ಶೆಟ್ಟರ್ ಅವರಿಗೆ ಲೋಕಾಪೂರದಿಂದ ಧಾರವಾಡಕ್ಕೆ ಏಕೆ ರೈಲ್ವೆ ಮಾರ್ಗ ಮಾಡಬೇಕು ಎಂದು ವಿವರವಾದ ಮಾಹಿತಿ ನೀಡಿ ಗಮನ ಸೆಳೆದಾಗ ಸಂಸದರು, ರಾಜ್ಯ ರೈಲ್ವೆ ಸಚಿವರಿಗೆ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ಕರೆದುಕೊಂಡು ಕೇಂದ್ರ ರೈಲ್ವೆ ಸಚಿವರಿಗೆ ಭೇಟಿಯಾಗಿ ಬೆಳಗಾವಿ ಜಿಲ್ಲೆಯ ರಾಮದುರ್ಗ, ಶಿರಸಂಗಿ, ಸವದತ್ತಿ ಯಲ್ಲಮ್ಮ ದೇವಸ್ಥಾನಗಳಿಗೆ ಬರುವ ಜನರ ಹಾಗೂ ಪ್ರವಾಸಿ ತಾಣದ ಬಗ್ಗೆ ಪ್ರಮುಖವಾಗಿ ಶಬರಿಕೊಳ್ಳದ ಕುರಿತು ಮಾಹಿತಿ ನೀಡಲಾಗಿದೆ. ಆಗ ಕೇಂದ್ರ ರೈಲ್ವೆ ಸಚಿವರು ಸಾಮಾನ್ಯ ಸಮೀಕ್ಷೆಗೆ ಪುನರ್ ಪರಿಶೀಲನೆ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.

ಲೋಕಾಪೂರದಿಂದ ಧಾರವಾಡದ ವರೆಗಿನ ರೈಲ್ವೆ ಮಾರ್ಗದ ಕುರಿತು ಪುನರ್ ಪರಿಶೀಲನೆ ಮಾಡಿ ಸಮೀಕ್ಷೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿದ ಮುಖ್ಯ ವ್ಯವಸ್ಥಾಪಕರು ಮನವಿ ಮೇರೆಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೋರಾಟಗಾರರು ತಿಳಿಸಿದರು.

ಮನವಿ ನೀಡುವ ನಿಯೋಗದಲ್ಲಿ ಹೋರಾಟ ಸಮಿತಿಯ ಮುಖಂಡ ಕುತುಬುದ್ದಿನ್ ಖಾಜಿ, ಜಿ.ಎಂ.ಜೈನೆಖಾನ್, ಮಹೆಬೂಬ ಯಾದವಾಡ, ಎಸ್.ಜಿ.ಚಿಕ್ಕನರಗುಂದ, ಶಶಿಕಾಂತ ನೆಲ್ಲೂರ, ಡಿ.ಎಫ್.ಹಾಜಿ, ದಾದಾಫೀರ ಕೆರೂರ, ಸವದತ್ತಿ ಹೋರಾಟ ಸಮಿತಿಯ ಬಸವರಾಜ ಕಪ್ಪನ್ನವರ, ಶಂಕರಪ್ಪ ತೊರಗಲ್, ರಾಜಶೇಖರ ನಿಡೋಣಿ, ಬಾಗಲಕೋಟ ಸಮಿತಿಯ ಮೈನುದ್ದಿನ್ ಖಾಜಿ, ಮಂಜುಳಾ ಭೋಕರಿ, ಪ್ರೇಮಾ ರಾಠೋಡ ಮತ್ತು ಮಮತಾಜ ಸುತಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.