ಬೆಳಗಾವಿ: ‘ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದೇನೆ. ಈ ಸಂಬಂಧ ಚರ್ಚಿಸಲು ಮಾರ್ಚ್ 31ರಂದು ನಗರದಲ್ಲಿ ಸಮಾನ ಮನಸ್ಕರ ಸಭೆ ಕರೆಯಲಾಗಿದೆ’ ಎಂದು ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ ಶೆಟ್ಟರ್ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರನ್ನು ಮನಬಂದಂತೆ ಟೀಕಿಸಿದ್ದರು. ಈಗ ಅವರನ್ನೇ ಮತ್ತೆ ಪಕ್ಷಕ್ಕೆ ಬರಮಾಡಿಕೊಂಡು, ಬೆಳಗಾವಿ ಟಿಕೆಟ್ ಕೊಟ್ಟಿರುವುದು ಸರಿಯಲ್ಲ’ ಎಂದು ದೂರಿದರು.
‘ನನಗೇ ಟಿಕೆಟ್ ಕೊಡಬೇಕೆಂದು ಒತ್ತಡ ಹೇರಿಲ್ಲ. ಆದರೆ, ಸ್ಥಳೀಯವಾಗಿಯೇ ಹಲವು ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ, ಹೊರಗಿನವರಿಗೆ ಮಣೆ ಹಾಕಿದ್ದು ಉತ್ತಮ ಬೆಳವಣಿಗೆಯಲ್ಲ. ಇನ್ನೂ ಯಾರಿಗೆ ಟಿಕೆಟ್ ನೀಡುವುದು ಸೂಕ್ತವೆಂದು ಪಕ್ಷದವರು ನಡೆಸಿದ ಸಮೀಕ್ಷೆಯೇ ಸುಳ್ಳು. ಸಮೀಕ್ಷೆಯಲ್ಲಿ ಹೆಸರೇ ಬಾರದವರಿಗೆ ಟಿಕೆಟ್ ಕೊಟ್ಟಿದ್ದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದು, ಮಾ. 31ರಂದು ನಡೆಯುವ ಸಭೆಯಲ್ಲಿ ಎಲ್ಲರೂ ಕೈಗೊಳ್ಳುವ ನಿರ್ಧಾರದಂತೆ ಮುಂದುವರಿಯುತ್ತೇನೆ’ ಎಂದು ತಿಳಿಸಿದರು.
‘ನಿಮ್ಮ ಮನವೊಲಿಕೆಗೆ ಬಿಜೆಪಿ ನಾಯಕರು ಪ್ರಯತ್ನಿಸಿದ್ದಾರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಈವರೆಗೆ ಬಿಜೆಪಿಯ ಯಾವೊಬ್ಬ ನನ್ನನ್ನು ಸಂಪರ್ಕಿಸಿಲ್ಲ. ಅವರು ಸಂಪರ್ಕಿಸಲಿ, ಬಿಡಲಿ. ಬಿಜೆಪಿ ನಿರ್ಧಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಂದ ನಂತರವೂ, ನರೇಂದ್ರ ಮೋದಿ ತಂಡವನ್ನೇ ಸೇರಿಕೊಳ್ಳುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.