ಬೈಲಹೊಂಗಲ: ‘ಭಕ್ತಿ, ಕಾಯಕ, ದಾಸೋಹ, ಬಸವ ತತ್ವದಡಿಯಲ್ಲಿ ಪ್ರತಿಯೊಬ್ಬರು ಸೇವೆ ಸಲ್ಲಿಸಬೇಕು. ಗುರು ಬಸವಣ್ಣನ ಜೀವನ ಆದರ್ಶಗಳನ್ನು ಅಳವಡಿಸಿಕೊಂಡು ಧರ್ಮದಿಂದ ಸಾಗಬೇಕು’ ಎಂದು ಬೆಳಗಾವಿ-ನಾಗನೂರ ರುದ್ರಾಕ್ಷಿಮಠ ಪೀಠಾಧಿಪತಿ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ಪಟ್ಟಣದ ಶಾಖಾ ಮೂರುಸಾವಿರಮಠದಲ್ಲಿ ಬಸವ ಸಂಸ್ಕೃತಿ ಅಭಿಯಾನ 2025ರ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಬಾಗಲಕೋಟಿಯಿಂದ ಬೆಳಗಾವಿಗೆ ಸೆ.11 ರಂದು ಆಗಮಿಸಲಿರುವ ಬಸವ ಸಂಸ್ಕೃತಿ ರಥಯಾತ್ರೆಯಲ್ಲಿ ಲಿಂಗಾಯತ ಧರ್ಮ, ಜಾತಿ ಗಣತಿ ಕುರಿತು ಸಂವಾದ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳು, ನಾಗರಿಕರು, ಮಠಾಧೀಶರು ಭಾಗವಹಿಸಲಿದ್ದಾರೆ’ ಎಂದರು.
ಬೆಳಗಾವಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ‘ಬೆಳಗಾವಿಯಲ್ಲಿ ಬೃಹತ್ ಮೆರವಣಿಗೆ ಆಯೋಜಿಸಲಾಗಿದ್ದು, ಜಿಲ್ಲೆಯಿಂದ ಭಕ್ತರು ಆಗಮಿಸಿ ಬಸವಣ್ಣನವರ ತತ್ವಗಳನ್ನು ನಾಡಿನ ಮೂಲೆ ಮೂಲೆಗೆ ಪಸರಿಸುವ ಕಾರ್ಯ ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.
ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ‘ಬಸವ ತತ್ವದಡಿ ಎಲ್ಲ ಸಂಘಟನೆಗಳು ಕೂಡಿಕೊಂಡು ಬಸವ ತತ್ವ , ಲಿಂಗಾಯತ ಧರ್ಮವನ್ನು ಉಳಿಸಿ, ಬೆಳೆಸುವಲ್ಲಿ ಕೈ ಜೋಡಿಸೋಣ’ ಎಂದರು.
ಪ್ರಕಾಶ ಮೂಗಬಸವ, ಬಿ.ಬಿ.ಗಣಾಚಾರಿ, ಪುರಸಭೆ ಅಧ್ಯಕ್ಷ ವಿನಯ ಬೋಳಣ್ಣವರ, ಎ.ಎನ್.ಬಾಳಿ ಮಾತನಾಡಿದರು.
ರುದ್ರಾಕ್ಷಿಮಠ ಬಸವಲಿಂಗ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಸವ ಸಂಸ್ಕೃತಿ ಅಭಿಯಾನ ಕರಪತ್ರ ಬಿಡುಗೊಳಿಸಲಾಯಿತು.
ಶಿವರಂಜನ ಬೋಳಣ್ಣವರ, ಬಸವರಾಜ ಕೌಜಲಗಿ, ಉಮೇಶ ಬೋಳತ್ತೀನ, ಮಹೇಶ ಕೋಟಗಿ, ಬಸವರಾಜ ಜನ್ಮಟ್ಟಿ, ಶ್ರೀಶೈಲ ಶರಣಪ್ಪನವರ, ಚಂದ್ರಶೇಖರ ಕೊಪ್ಪದ, ಅಶೋಕ ಮಳಗಲಿ ಹಾಗೂ ತಾಲ್ಲೂಕಿನ ವಿವಿಧ ಬಸವ ಲಿಂಗಾಯತ ಪರ ಸಂಘಟನೆ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.