ಅಥಣಿ: ಮಾಳಿ ಸಮಾಜಕ್ಕೆ ಸರ್ಕಾರ ಶೀಘ್ರವೇ ನಿಗಮ ಮಂಡಳಿ ರಚನೆ ಮಾಡಬೇಕು ಇಲ್ಲವಾದರೆ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಆಮರಣ ಉಪವಾಸವನ್ನು ಸಮಾಜದಿಂದ ಹಮ್ಮಿಕೊಳ್ಳಲಾಗುವುದು ಎಂದು ಮಾಳಿ-ಮಾಲಗಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಡಾ.ಸಿ.ಬಿ.ಕುಲಗುಡೆ ಹೇಳಿದರು.
ಅವರು ಸ್ಥಳೀಯ ಗಚ್ಚಿನಮಠದ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಮಾಳಿ-ಮಾಲಗಾರ ಸಮಾಜದಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ಮಾತನಾಡಿ, ನಮ್ಮ ಸಮಾಜದ ಬಡವಿದ್ಯಾರ್ಥಿಗಳಿಗೆ ಡಿಸಿಸಿ ಬ್ಯಾಂಕಿನಿಂದ ಕಡಿಮೆ ಬಡ್ಡಿದರದಲ್ಲಿ ಉನ್ನತ ವ್ಯಾಸಂಗಕ್ಕೆ ಹಣಕಾಸಿನ ನೆರವು ನೀಡಬೇಕೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಲ್ಲಿ ವಿನಂತಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಬ ಕುಲಗುಡೆ ಮಾತನಾಡಿ, ಪಕ್ಷಾತೀತವಾಗಿ ಸಮಾಜ ಸಂಘಟನೆಗೆ ಎಲ್ಲರೂ ಮುಂದಾಗಬೇಕು. ಇದರಿಂದ ಸಮಾಜ ಅಭಿವೃದ್ದಿ ಹೊಂದಲು ಸಾಧ್ಯ. ಅದೇ ರೀತಿ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲು ಬ್ಯಾಂಕಿನ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸುವ ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ಕಾಯಕತತ್ವವನ್ನ ಮಾಳಿ-ಮಾಲಗಾರ ಸಮಾಜ ಪಾಲಿಸುವಲ್ಲಿ ಶ್ರಮಿಸುತ್ತಿದೆ. ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡು ಕೃಷಿಕ ಕುಟುಂಬವಾಗಿದೆ. ಸಮಾಜ ಸದೃಢವಾಗಿ ಬೆಳೆಯಲು ಅಂಬೇಡ್ಕರ್ ತತ್ವದಂತೆ ಶಿಕ್ಷಣ, ಸಂಘಟನೆ, ಹೋರಾಟ ಅವಶ್ಯವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ,ಗಣ್ಯರಾದ ಕಾಡಪ್ಪ ಮಾಳಿ, ಎಸ್.ಕೆ.ಬುಟಾಳಿ, ರವಿ ಕುರಬೇಟ, ಶಿವಶಂಕರ ಮುಕರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಶಿವಲಿಲಾ ಬುಟಾಳೆ, ಅಧ್ಯಕ್ಷತೆಯನ್ನ ಮಾಳಿ ಸಮಾಜದ ಅಧ್ಯಕ್ಷ ಗಿರೀಶ ದಿವಾನಮಳ ವಹಿಸಿದ್ದರು,ಬಸವರಾಜ ಬುಟಾಳೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.