ಬೆಳಗಾವಿಯ ವಡಗಾವಿಯ ಮಂಗಾಯಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು ಪ್ರಜಾವಾಣಿ ಚಿತ್ರ
ಬೆಳಗಾವಿ: ಇಲ್ಲಿನ ವಡಗಾವಿಯ ಮಂಗಾಯಿ ದೇವಿ ದೇವಸ್ಥಾನದಲ್ಲಿ ಮಂಗಳವಾರ ಸಂಭ್ರಮದಿಂದ ಜಾತ್ರೆ ಜರುಗಿತು. ಸರ್ವಭಾಷಿಕರು, ಸರ್ವಧರ್ಮೀಯರು ವಿವಿಧ ಧಾರ್ಮಿಕ ಆಚರಣೆ ಕೈಗೊಂಡು ಸಾಮರಸ್ಯ ಮೆರೆದರು.
ಕರ್ನಾಟಕ ಮಾತ್ರವಲ್ಲದೆ; ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಮಾಡಿದರು. ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ವಿವಿಧ ಕಾಣಿಕೆಗಳನ್ನು ದೇವರಿಗೆ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ದೇವಸ್ಥಾನಕ್ಕೆ ಸಾಗುವ ಎಲ್ಲ ಮಾರ್ಗಗಳಲ್ಲಿ ಹೆಚ್ಚಿತ್ತು. ದೇವಸ್ಥಾನ ಪರಿಸರ ಭಕ್ತರಿಂದ ಕಿಕ್ಕಿರಿದು ತುಂಬಿತ್ತು. ಜನದಟ್ಟಣೆ ನಿಯಂತ್ರಿಸಲು ಮತ್ತು ಸುಲಭವಾಗಿ ದೇವಿ ದರ್ಶನ ಪಡೆಯಲು ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಜಿಟಿಜಿಟಿ ಮಳೆ ಮಧ್ಯೆಯೂ ಜನರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ದೇವರ ನಾಮಸ್ಮರಣೆ ಮಾಡುತ್ತ ಭಕ್ತರು ದೇಗುಲದತ್ತ ಹೆಜ್ಜೆ ಹಾಕುತ್ತಿರುವುದು ಕಂಡುಬಂತು.
ದೇವಸ್ಥಾನ ಬಳಿ ಇರುವ ಪೂಜಾ ಸಾಮಗ್ರಿಗಳ ಅಂಗಡಿಗಳಲ್ಲಿ ಗ್ರಾಹಕರು ಖರೀದಿಗೆ ಮುಗಿಬಿದ್ದರು. ಇದರೊಂದಿಗೆ ಕೋಳಿ ಮರಿಗಳ ವ್ಯಾಪಾರವೂ ಜೋರಾಗಿತ್ತು. ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
‘ಈ ವರ್ಷ ಅದ್ದೂರಿಯಾಗಿ ಜಾತ್ರೆ ಆಚರಿಸುತ್ತಿದ್ದು, ಧಾರ್ಮಿಕ ಆಚರಣೆಗೆ ವಿಧ್ಯುಕ್ತವಾಗಿ ಚಾಲನೆ ಕೊಟ್ಟಿದ್ದೇವೆ. ಈ ವಾರವಿಡೀ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ’ ಎಂದು ಅರ್ಚಕ ವಿನಾಯಕ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ಜಾತ್ರೆ ಪ್ರಯುಕ್ತ ವಡಗಾವಿಯ ಸಂಭಾಜಿ ನಗರದಲ್ಲಿ ಟಗರುಗಳ ಕಾದಾಟ ಆಯೋಜಿಸಲಾಗಿತ್ತು. ಭಕ್ತರು ಇದನ್ನು ಕುತೂಹಲದಿಂದ ವೀಕ್ಷಿಸಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.