ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಚಿಕ್ಕಾಲಗುಡ್ಡ ಗ್ರಾಮದ ಸಾಯಿಮಂದಿರ ಕಲ್ಯಾಣಮಂಟಪದಲ್ಲಿ ನಿಗದಿಯಾಗಿದ್ದ ಮದುವೆ ದಿನವೇ ವರ ಪರಾರಿಯಾದ್ದರಿಂದ ವಧು ಮತ್ತು ಕುಟುಂಬದವರು ಕಂಗಾಲಾಗಿದ್ದಾರೆ.
ಸಂಕೇಶ್ವರದ ನಿವಾಸಿ ಸುನೀಲ ಪಾಟೀಲ ನಾಪತ್ತೆಯಾದವರು. ಮಹಾರಾಷ್ಟ್ರದ ಯುವತಿಯೊಂದಿಗೆ ಗುರುವಾರ ಮಧ್ಯಾಹ್ನ 12.30ಕ್ಕೆ ವಿವಾಹ ಮುಹೂರ್ತ ನಿಶ್ಚಯವಾಗಿತ್ತು. ಬುಧವಾರ ರಾತ್ರಿವರೆಗೂ ಕುಟುಂಬದವರೊಂದಿಗೆ ಇದ್ದ ವರ, ಬುಧವಾರ ಮಧ್ಯರಾತ್ರಿಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಇದರಿಂದಾಗಿ, ಸಂಭ್ರಮದ ತುಂಬಿದ್ದ ಮಂಟಪದಲ್ಲಿ ಆತಂಕ ಮನೆ ಮಾಡಿತ್ತು.
ಸುನಿಲ್ ಕನ್ನಡ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ, ಸಂಘಟನೆಯೊಂದರ ತಾಲ್ಲೂಕು ಘಟಕದ ಅಧ್ಯಕ್ಷ ಎನ್ನಲಾಗಿದೆ. 8 ತಿಂಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು ಎಂದು ತಿಳಿದುಬಂದಿದೆ.
ಸಾವಿರ ಜನರಿಗಾಗಿ ಊಟ ಸಿದ್ಧಪಡಿಸಲಾಗಿತ್ತು. ಪುತ್ರಿಯ ಮದುವೆ ಅದ್ಧೂರಿಯಾಗಿ ಮಾಡಿಕೊಡಬೇಕೆಂದು ಬಂದಿದ್ದ ಯುವತಿ ಕುಟುಂಬದವರು ಕಂಗಾಲಾಗಿದ್ದಾರೆ. ಮದು ಮಗ ಎಲ್ಲಿ ಹೋದನೋ ಎನ್ನುವ ಆತಂಕದಲ್ಲಿ ಯುವಕನ ಕುಟುಂಬದವರಿದ್ದಾರೆ. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.