ADVERTISEMENT

ಮೆಳವಂಕಿ ಸೇತುವೆ ಕುಸಿತ: ವಾಹನ ಸಂಚಾರ ಸ್ಥಗಿತ

₹ 70 ಲಕ್ಷ ವೆಚ್ಚದಲ್ಲಿ ನಿರ್ಮಾಣ: ಬಾಲಚಂದ್ರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 15:05 IST
Last Updated 5 ಅಕ್ಟೋಬರ್ 2020, 15:05 IST
ಗೋಕಾಕ ತಾಲ್ಲೂಕಿನ ಮೆಳವಂಕಿ ಗ್ರಾಮ ಬಳಿಯ ಗೋಕಾಕ-ಕೌಜಲಗಿ ದಂಡಿನ ಮಾರ್ಗ ಮಧ್ಯದ ಸಂಪರ್ಕ ಸೇತುವೆ ಸೋಮವಾರ ಕುಸಿದಿದೆ
ಗೋಕಾಕ ತಾಲ್ಲೂಕಿನ ಮೆಳವಂಕಿ ಗ್ರಾಮ ಬಳಿಯ ಗೋಕಾಕ-ಕೌಜಲಗಿ ದಂಡಿನ ಮಾರ್ಗ ಮಧ್ಯದ ಸಂಪರ್ಕ ಸೇತುವೆ ಸೋಮವಾರ ಕುಸಿದಿದೆ   

ಗೋಕಾಕ: ಸತತ ಮಳೆಯಿಂದಾಗಿ ಗೋಕಾಕ-ಕೌಜಲಗಿ ದಂಡಿನ ಮಾರ್ಗದ ಮೆಳವಂಕಿ ಗ್ರಾಮ ಹೊರವಲಯದಲ್ಲಿರುವ ಸೇತುವೆ ಸೋಮವಾರ ಬೆಳಿಗ್ಗೆ ಕುಸಿದಿದ್ದು, ಸಂಪರ್ಕ ಕಡಿತಗೊಂಡಿದೆ. ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವ ಸ್ಥಿತಿ ಎದುರಾಗಿದೆ.

35 ವರ್ಷಗಳಿಗಿಂತ ಹಿಂದೆ ಲೋಕೋಪಯೋಗಿ ಇಲಾಖೆ ನಿರ್ಮಿಸಿದ್ದ ಈ ಸೇತುವೆ, ಪ್ರವಾಹ ಬಂದಾಗಲೆಲ್ಲಾ ಸಂಪೂರ್ಣವಾಗಿ ಮುಳುಗಡೆಯಾಗುತ್ತಿತ್ತು. ಹಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಶಿಥಿಲಗೊಂಡಿತ್ತು. ಕುಸಿದ ವೇಳೆ ಯಾವುದೇ ವಾಹನ ಸಂಚಾರ ಇರಲಿಲ್ಲ. ಇದರಿಂದ ಪ್ರಾಣಾಪಾಯ ಸಂಭವಿಸಿಲ್ಲ.

ಮೆಳವಂಕಿ, ಹಡಗಿನಾಳ, ಕಲಾರಕೊಪ್ಪ ಗ್ರಾಮಗಳ ಜನರ ಸಂಚಾರಕ್ಕೆ ತೊಂದರೆಯಾಗಿದೆ. ಬೆಟಗೇರಿ ಹಾಗೂ ಮಮದಾಪೂರ ಮಾರ್ಗವಾಗಿ ಸಂಚರಿಸುವುದು ಅನಿವಾರ್ಯವಾಗಿದೆ.

ADVERTISEMENT

ಸೇತುವೆ ಕುಸಿತದ ವಿಷಯ ತಿಳಿದ ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ಲೋಕೋಪಯೋಗಿ ಇಲಾಖೆ ಎಸ್‌ಇ ಪಿ.ವೈ. ಪವಾರ, ಚಿಕ್ಕೋಡಿಯ ಎಇ ವಿ.ಎನ್. ಪಾಟೀಲ, ಎಇಇ ಆರ್.ಎ. ಗಾಣಿಗೇರ ಪರಿಶೀಲಿಸಿದರು.

‘ಸೇತುವೆ ನಿರ್ಮಾಣಕ್ಕೆ ಶೀಘ್ರದಲ್ಲೇ ₹ 70 ಲಕ್ಷ ಒದಗಿಸಲಾಗುವುದು. ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯರ್ವಹಿಸಿ ಬೈಪಾಸ್ ರಸ್ತೆ ನಿರ್ಮಿಸಿ ರೈತರಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಮಂಗಳವಾರದಿಂದಲೇ ಕಾಮಗಾರಿ ಆರಂಭಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.