ಬೆಳಗಾವಿ: ‘ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ದಿನನಿತ್ಯ ಹಾಲು ಪೂರೈಕೆ ಮಾಡುತ್ತಿರುವ ಹೈನುಗಾರ ರೈತರು ಮೃತಪಟ್ಟರೆ ಅವರ ಕುಟುಂಬ ವರ್ಗಕ್ಕೆ ₹1 ಲಕ್ಷ ಜೀವವಿಮಾ ಸೌಲಭ್ಯ ಜಾರಿ ಮಾಡಲು ತೀರ್ಮಾನಿಸಲಾಗಿದೆ’ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಕಟಿಸಿದರು.
ನಗರದಲ್ಲಿ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಗುರುವಾರ ಜರುಗಿದ 2024–25 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಒಕ್ಕೂಟಕ್ಕೆ ಹಾಲು ಪೂರೈಸುವ 35 ಸಾವಿರ ಹಾಲು ಉತ್ಪಾದಕ ಸದಸ್ಯರಿಗೂ ಸಹ ಶೇ75 ರ ಅನುದಾನದಲ್ಲಿ ವಿಮಾ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು. ಈ ಹೊಸ ಯೋಜನೆಯ ಅನುಷ್ಠಾನದಿಂದ ಒಕ್ಕೂಟಕ್ಕೆ ವಾರ್ಷಿಕವಾಗಿ ಸುಮಾರು ₹50 ಲಕ್ಷದಿಂದ ₹60 ಲಕ್ಷ ಹೊರೆಯಾಗಲಿದೆ’ ಎಂದು ಹೇಳಿದರು.
‘ಒಕ್ಕೂಟದ ವ್ಯಾಪ್ತಿಯಲ್ಲಿ ಸುಮಾರು 609 ಸಂಘಗಳಿಂದ ದಿನಾಲು 2 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದನ್ನು 3 ಲಕ್ಷ ಲೀಟರ್ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಕಳೆದ ಸಾಲಿನಲ್ಲಿ ಸುಮಾರು ₹13 ಕೋಟಿ ಲಾಭವಾಗಿದ್ದು, ಈ ಲಾಭಾಂಶವನ್ನು ಶೇ 60ರಷ್ಟು ರೈತರಿಗೆ ಕೃಷಿ ಸಲಕರಣೆಗಾಗಿ ಅನುದಾನವನ್ನು ಒಕ್ಕೂಟದಿಂದ ನೀಡಲಾಗುತ್ತಿದೆ. ರಬ್ಬರ್ ಮ್ಯಾಟ್, ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರಗಳನ್ನು ರೈತರಿಗೆ ವಿತರಣೆಯನ್ನು ಮಾಡಲಾಗಿದೆ’ ಎಂದು ಅವರು ಹೇಳಿದರು.
‘ಪ್ರಸ್ತುತ ಸಾಲಿನಲ್ಲಿ ಒಕ್ಕೂಟದ ಪರವಾಗಿ ನೂರು ಪ್ರಾಂಚೈಸಿ ಮತ್ತು ಮಾರಾಟ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ದಿನವಾಗಿದ್ದ ಒಂದೇ ದಿನದಲ್ಲಿ 33 ನೂತನ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಿರುವುದು ಒಕ್ಕೂಟದ ಮೈಲುಗಲ್ಲಾಗಿದೆ’ ಎಂದರು.
ಬೆಮುಲ್ ಆಡಳಿತ ಮಂಡಳಿಯ ಸದಸ್ಯರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಡಾ.ಬಸವರಾಜ ಪರವಣ್ಣವರ, ಬಾಬುರಾವ ವಾಘಮೋಡೆ, ವಿರೂಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ನಾಮ ನಿರ್ದೇಶಿತ ಸದಸ್ಯರು ವೇದಿಕೆ ಮೇಲಿದ್ದರು. ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಕಾಂತ್ ವಾರ್ಷಿಕ ವರದಿ ಮಂಡಿಸಿದರು.
ಬೆಮುಲ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ₹400 ಕೋಟಿ ವಹಿವಾಟು ನಡೆಸಿದ್ದು ಮುಂದಿನ ಸಾಲಿನಲ್ಲಿ ₹500 ಕೋಟಿ ವ್ಯಾಪಾರ ವಹೀವಾಟು ನಡೆಸುವ ಗುರಿ ಹೊಂದಿದ್ದೇವೆಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷ ಬೆಮುಲ್
‘ಬ್ಯಾಂಕ್ ಆಡಳಿತ ಚುಕ್ಕಾಣಿ ಶತಸಿದ್ಧ’
‘ಬಿಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ನಾವು ಸ್ಪಷ್ಟ ಬಹುಮತ ಸಾಧಿಸುವ ಮೂಲಕ ಬ್ಯಾಂಕಿನ ಆಡಳಿತದ ಚುಕ್ಕಾಣಿ ಹಿಡಿಯುತ್ತೇವೆ’ ಎಂದು ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಬಿಡಿಸಿಸಿ 16ರ ಪೈಕಿ 12 ನಿರ್ದೇಶಕರನ್ನು ಗೆಲ್ಲಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ. ಆದಷ್ಟು ಅವಿರೋಧ ಆಯ್ಕೆಗೆ ಪ್ರಯತ್ನಿಸಲಾಗುವುದು’ ಎಂದರು. ‘ಹುಕ್ಕೇರಿ ತಾಲ್ಲೂಕಿನಲ್ಲಿ ಕೆಲ ಕಡೆಳಲ್ಲಿ ಗಲಾಟೆಯಾಗುತ್ತಿದೆ. ಅಲ್ಲಿ ಚುನಾವಣೆಯಾಗಲೇಬೇಕು ಎಂದು ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಬರಬಾರದು. ಬಂದರೆ ಇಂತಹ ಗಲಾಟೆಗಳಾಗುತ್ತವೆ. ಹುಕ್ಕೇರಿ ಕಿತ್ತೂರು ಮತ್ತು ರಾಮದುರ್ಗದಲ್ಲಿ ಯಾರ ಮೇಲೆ ಪ್ರೀತಿ ಇದೆಯೋ ಅವರು ಗೆಲುವು ಸಾಧಿಸುತ್ತಾರೆ. ನಮ್ಮ ವಿರುದ್ಧ ರಮೇಶ ಕತ್ತಿ ಮಾಡಿರುವ ಆರೋಪಕ್ಕೆ ಹುಕ್ಕೇರಿಯಲ್ಲೇ ಉತ್ತರ ನೀಡುತ್ತೇನೆ. ಚುನಾವಣೆ ಬಂದ ಬಳಿಕ ರಾಜಕಾರಣ ಸರ್ಕಸ್ಸು ಇದ್ದೇ ಇರುತ್ತದೆ. ಹುಕ್ಕೇರಿ ತಾಲ್ಲೂಕಿನಲ್ಲಿ ಉಸ್ತುವಾರಿ ಸಚಿವರು ಹೋರಾಟ ಮಾಡುತ್ತಿದ್ದಾರೆ. ನಾವು ಸಮಾಧಾನದಿಂದ ಚುನಾವಣೆ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.