ADVERTISEMENT

ಸ್ವಾರ್ಥ‌ರಹಿತ ರಾಜಕಾರಣದಿಂದ ಅಭಿವೃದ್ಧಿ

ಆರು ಗ್ರಾಮಗಳ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಿದ ಸಚಿವೆ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:07 IST
Last Updated 8 ಮಾರ್ಚ್ 2024, 16:07 IST
ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿ ಸಮುದಾಯ ಭವನ, ಉದ್ಯಾನ ಕಾಮಗಾರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು
ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿ ಸಮುದಾಯ ಭವನ, ಉದ್ಯಾನ ಕಾಮಗಾರಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು   

ಬೆಳಗಾವಿ: ‘ನಾನು ಎಂದೂ ದ್ವೇಷ ರಾಜಕೀಯ ಮಾಡುವುದಿಲ್ಲ. ನನ್ನ ದೃಷ್ಟಿ ಅಭಿವೃದ್ಧಿ ಕಡೆಗೆ ಮಾತ್ರ. ನನಗೆ ರಾಜಕೀಯ ಪುನರ್ಜನ್ಮ ನೀಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ತಾಲ್ಲೂಕಿನ ಮಾರಿಹಾಳ ಗ್ರಾಮದಲ್ಲಿ ಗುರುವಾರ ಮುತಗಾ, ಮೊದಗಾ, ತುಮ್ಮರಗುದ್ದಿ, ಕರಡಿಗುದ್ದಿ ಹಾಗೂ ಮಾರಿಹಾಳ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿ‌ ಅವರು ಮಾತನಾಡಿದರು.

‘ನಾನು ಅಪ್ಪಟ ರಾಮಭಕ್ತೆ. ರಾಮ ಮಂದಿರ ಕಟ್ಟಿಸಿ ಸುಮ್ಮನಾದರೆ ರಾಮರಾಜ್ಯ ಆಗುವುದಿಲ್ಲ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೂಡ ರಾಮರಾಜ್ಯ ಪರಿಕಲ್ಪನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸರ್ಕಾರ ಪ್ರತಿ ತಿಂಗಳು ಗ್ಯಾರಂಟಿ ಯೋಜನೆಗಳಿಗಾಗಿ ₹5,000 ಕೋಟಿ ಖರ್ಚು ಮಾಡುತ್ತಿದೆ‌. ಇದು ನಿಜವಾದ ರಾಮ ರಾಜ್ಯದ ಪರಿಕಲ್ಪನೆ’ ಎಂದು‌‌ ಹೇಳಿದರು.

ADVERTISEMENT

‘ಧರ್ಮರಾಯನ ಧರ್ಮ, ಅರ್ಜುನನ ಗುರಿ, ಕೃಷ್ಣನ ಚಾತುರ್ಯ, ವಿಧುರನ ಬುದ್ಧಿ, ಭೀಮನ ಬಲ, ರಾಮನ ಔದಾರ್ಯ, ಶಿವಾಜಿ ಮಹರಾಜರ ಧೈರ್ಯ; ಈ ಗುಣಗಳು ಇದ್ದಾಗ ಮಾತ್ರ ಒಳ್ಳೆಯ ನಾಯಕರಾಗಲು ಸಾಧ್ಯ. ನಾಯಕತ್ವ ಗುಣದ ಜೊತೆಗೆ ವಿನಮ್ರತೆಯೂ ಇರಬೇಕು. ಆ ವಿನಮ್ರತೆ ಇದ್ದಾಗಷ್ಟೇ ರಾಜಕೀಯ ನಾಯಕರಿಗೆ ಸಾರ್ಥಕತೆ ಇರುತ್ತದೆ’ ಎಂದರು.

‘ನಾನೆಂದೂ ಜಾತಿ ರಾಜಕೀಯ ಮಾಡುವುದಿಲ್ಲ. ನಾನು ಹುಟ್ಟಿದ್ದು ಲಿಂಗಾಯತ ಸಮಾಜವಾದರೂ ನನಗೆ ಪುನರ್ಜನ್ಮ ಕೊಟ್ಟಿದ್ದು ಕ್ಷೇತ್ರದ ಮತದಾರರು. ಸ್ವಾರ್ಥ ರಹಿತ ರಾಜಕೀಯ ಮಾಡುವುದೇ ನನ್ನ ಗುರಿ’ ಎಂದರು‌.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ಪಾಟೀಲ, ಉಪಾಧ್ಯಕ್ಷ ಆಸೀಫ್ ಮುಲ್ಲಾ, ರಾಮಚಂದ್ರ ಚವ್ಹಾಣ, ಮಹಮ್ಮದ್ ಗೌಸ ಭಾಗವಾನ್, ಕಲ್ಲಪ್ಪ ಸೀತಿಮನಿ, ನಾರಾಯಣ ಸೊಗಲಿ, ಸಂಜಯ್ ಚಾಟೆ, ಬಸವರಾಜ ಮ್ಯಾಗೋಟಿ, ಪಿಡಿಒ ರಾಣಿ ಪೂಜಾರ, ಲಕ್ಷ್ಮೀನಾರಾಯಣ ಕಲ್ಲೂರ್, ನಿರ್ಮಿತ್ರ ಕೇಂದ್ರ‌ ಪ್ರೊಜೆಕ್ಟ್ ನಿರ್ದೇಶಕ ಶೇಖರಗೌಡ ಕುರಡಗಿ ಹಾಗೂ ಗ್ರಾಮಸ್ಥರು ಇದ್ದರು.

ಬೆಳಗಾವಿ ತಾಲ್ಲೂಕಿನ ಮಾರಿಹಾಳ ಗ್ರಾಮದಲ್ಲಿ ಗುರುವಾರ ವಿವಿಧ ಸಮುದಾಯ ಭವನ ಕಾಮಗಾರಿಗಳ ಚಾಲನಾ ಸಮಾರಂಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ದೀಪ ಬೆಳಗಿಸಿದರು

ಮಹಾಬಳೇಶ್ವರನಿಗೆ ಪೂಜೆ

ಬೆಳಗಾವಿ: ಇಲ್ಲಿನ ಸಹ್ಯಾದ್ರಿ ನಗರದಲ್ಲಿರುವ ಮಹಾಬಳೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ಉದ್ಯಾನ ಹಾಗೂ ಕೊಳವೆಬಾವಿ ಕಾಮಗಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. ಮಹಾ ಶಿವರಾತ್ರಿಯ ಪ್ರಯುಕ್ತ ಮಹಾಬಳೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.  ಅರ್ಚಕರಾದ ಅಡವಯ್ಯ ಹಿರೇಮಠ ವಿಜಯ ಹಿರೇಮಠ ಮಹಾಬಲೇಶ್ವರ ದೇವಸ್ಥಾನ ಸಮಿತಿಯ ಸದಸ್ಯರಾದ ಅಣ್ಣಯ್ಯ ಪಾಟೀಲ ರಾಜು ಡೂಗನವರ ಸುರೇಶ ಘೋರ್ಪಡೆ ಸಂಜು ಅಂಗಡಿ ಗೋಪಾಲ ಪಂಚಾಳ ಹರೀಶ ಹಂಡೆ ಮಲ್ಲಪ್ಪ ಮಾಕಿ ಗುರುಸಿದ್ದ ಪಾಟೀಲ ಅಡವಯ್ಯ ಸ್ವಾಮಿಗಳು ರತ್ನಾ ಕುಲಕರ್ಣಿ ಸುರಭಿ ಜಡಗಿ ರಾಜಶ್ರೀ ಅಶ್ವಿನಿ ಹಾವನ್ನಗೋಳ ಸ್ನೇಹಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.