ADVERTISEMENT

ಮೃತ ಪೌರಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿ ಶಾಸಕಿ ಲಕ್ಷ್ಮಿ ಧರಣಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 10:56 IST
Last Updated 21 ಜುಲೈ 2020, 10:56 IST
ಬೆಳಗಾವಿಯ ಮಹಾನಗರ ಪಾಲಿಕೆ ಎದುರು ಸೋಮವಾರ ಪೌರಕಾರ್ಮಿಕರ ಧರಣಿಗೆ ಬೆಂಬಲವಾಗಿ ಶಾಸಕಿ ಲಕ್ಷ್ಮಿ  ಹೆಬ್ಬಾಳಕರ ಅವರೂ ಧರಣಿಗೆ ಕುಳಿತರು.
ಬೆಳಗಾವಿಯ ಮಹಾನಗರ ಪಾಲಿಕೆ ಎದುರು ಸೋಮವಾರ ಪೌರಕಾರ್ಮಿಕರ ಧರಣಿಗೆ ಬೆಂಬಲವಾಗಿ ಶಾಸಕಿ ಲಕ್ಷ್ಮಿ  ಹೆಬ್ಬಾಳಕರ ಅವರೂ ಧರಣಿಗೆ ಕುಳಿತರು.   

ಬೆಳಗಾವಿ: ಕಸ ವಿಲೇವಾರಿ ಮಾಡುತ್ತಿದ್ದ ವೇಳೆ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತರಾದ ಪೌರಕಾರ್ಮಿಕ ಜಿತೇಂದ್ರ ಡಾವಳೆ ಅವರ ಕುಟುಂಬಕ್ಕೆ ತಕ್ಷಣ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಒತ್ತಾಯಿಸಿದರು.

ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಮಂಗಳವಾರ ಧರಣಿ ನಡೆಸುತ್ತಿದ್ದ ಮೃತ ಕುಟುಂಬದ ಸದಸ್ಯರು ಹಾಗೂ ಪೌರಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿದ ಅವರು, ‘ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಕೊರೊನಾ ಸೋಂಕಿನ ಭೀತಿಯಿಂದ ನಾವೆಲ್ಲ ಮನೆಯಲ್ಲಿ, ಕಚೇರಿಯಲ್ಲಿ ಕುಳಿತಿದಿದ್ದರೆ ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ನಗರ ಸ್ವಚ್ಛತೆ ಮಾಡಿದ್ದಾರೆ. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಜಿತೇಂದ್ರ ಸಾವಿಗೀಡಾಗಿದ್ದಾರೆ. ಅವರಿಗೆ ಪತ್ನಿ ಹಾಗೂ ಮೂರು ಜನ ಮಕ್ಕಳಿದ್ದಾರೆ. ಇವರ ಜೀವನ ನಿರ್ವಹಣೆ ಯಾರು ಮಾಡುವರು?’ ಎಂದು ಪ್ರಶ್ನಿಸಿದರು.

ADVERTISEMENT

‘ಸರ್ಕಾರ ಇದೆಯೋ, ಸತ್ತಿದೆಯೋ. ಇಂತಹ ಸಂದರ್ಭಗಳಲ್ಲಿಯೂ ಮಾನವೀಯತೆ ಮರೆತಿದೆ. ಆರ್‌ಟಿಒ ಫಿಟ್‌ನೆಸ್‌ ಸರ್ಟಿಫಿಕೇಟ್‌ ಇಲ್ಲದ ವಾಹನಗಳನ್ನು ಕಸ ವಿಲೇವಾರಿಗೆ ಬಳಸಲಾಗುತ್ತಿದೆ. ಕಪ್ಪು ಪಟ್ಟಿಯಲ್ಲಿರುವ ಗುತ್ತಿಗೆದಾರರನ್ನು ಸರ್ಕಾರ ಇಟ್ಟುಕೊಂಡಿದೆ’ ಎಂದು ಆರೋಪಿಸಿದರು.

ಸ್ಥಳಕ್ಕೆ ಬಂದ ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್‌. ಜಗದೀಶ ಮನವೊಲಿಸಲು ಪ್ರಯತ್ನಿಸಿದರು. ಸರ್ಕಾರದಿಂದ ದೊರೆಯುವ ಪರಿಹಾರ, ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.