ADVERTISEMENT

ಬಂಜಾರರು ವದಂತಿಗೆ ಕಿವಿಗೊಡಬೇಡಿ: ರಾಜೀವ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:14 IST
Last Updated 28 ಮಾರ್ಚ್ 2023, 6:14 IST

ನಾಗರಮೂನ್ನೋಳಿ (ಚಿಕ್ಕೋಡಿ ತಾ.): ‘ರಾಜ್ಯದ ಬಂಜಾರಾ, ಭೋವಿ, ಕೊರಮ,‌ ಕೊರಚ ಸಮುದಾಯದವರನ್ನು ಪರಿಶಿಷ್ಟ ಮೀಸಲಾತಿ ಪಟ್ಟಿಯಿಂದ ಹೊರಗಿಡುವ ಪ್ರಶ್ನೆಯೇ ಇಲ್ಲ. ಸುಳ್ಳು ಸುದ್ದಿಗಳಿಗೆ ಸಮುದಾಯದವರು ಕಿವಿಗೊಡಬಾರದು’ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಪಿ.ರಾಜೀವ್‌ ಹೇಳಿದರು.

ಗ್ರಾಮದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸಮುದಾಯದವರು ಇದಕ್ಕೆ ಕಿವಿಗೊಡಬಾರದು. ಆತಂಕಕ್ಕೆ ಒಳಗಾಗಬಾರದು’ ಎಂದರು.

‘ಕಳೆದ 50 ವರ್ಷಗಳಿಂದ ಇದ್ದ ಗೊಂದಲಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರೆ ಎಳೆದಿದ್ದಾರೆ. ಅಲ್ಲದೇ, ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಯಡಿಯೂರಪ್ಪ ಅವರು. ಶೇ 3ರಷ್ಟಿದ್ದ ಮೀಸಲಾತಿಯನ್ನು ಶೇ 4.5ಕ್ಕೆ ಹೆಚ್ಚಿಸಿದ್ದು ಅವರೇ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಬಿಜೆಪಿ ಸರ್ಕಾರ ಎಲ್ಲ ಸಮಾಜಗಳಿಗೂ ನ್ಯಾಯ ಒದಗಿಸಿದೆ’ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ನೋಡಿಕೊಂಡು ಬಿಜೆಪಿ ಪಟ್ಟಿ ತಯಾರಿಸುವುದಿಲ್ಲ. ಮೂರು ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆಗ ಗಮನಿಸಿ ಆದ್ಯತೆ ಕೊಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.