
ಕಾಗವಾಡ: ‘ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ತಂಟೆ ತಕರಾರು ಮಾಡದೆ ಗ್ರಾಮಗಳ ಅಭಿವೃದ್ಧಿ ಸಹಕಾರ ನೀಡಬೇಕು’ ಎಂದು ಶಾಸಕ ರಾಜು ಕಾಗೆ ಹೇಳಿದರು.
ತಾಲ್ಲೂಕಿನ ಮಂಗಸೂಳಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ₹2 ಕೋಟಿ ವೆಚ್ಚದ ಮಂಗಸೂಳಿ-ಪರೀದಖಾನವಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ, ಶೇಡಬಾಳ ಪಟ್ಟಣ ಪಂಚಾಯಿತಿ ವತಿಯಿಂದ ನಗರೋಥಾನ ಯೋಜನೆ ಅಡಿ ಮಂಜೂರಾದ ₹55 ಲಕ್ಷ ಐದು ರಸ್ತೆ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
‘ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಹಣ ನೀಡಿದರೂ ಸಾರ್ವಜನಿಕರು ಅತಿಕ್ರಮಣ ತೆರವುಗೊಳಿಸದೇ ಗುತ್ತಿಗೆದಾರರು ಹಾಗೂ ಅಧಿಕಾರಿಗಳೊಂದಿಗೆ ತಂಟೆ ತಕರಾರು ಮಾಡುವುದರಿಂದ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಗ್ರಾಮಗಳ ರಸ್ತೆ ಸುಧಾರಣೆ ಆದರೆ ನೀವು ಬೆಳೆದ ಬೆಳೆಯನ್ನು ಸರಾಗವಾಗಿ ಸಾಗಿಸಲು ಅನುಕೂಲವಾಗಲಿದೆ. ಒಂದು ವೇಳೆ ಅತಿಕ್ರಮಣ ಮಾಡಿ ತಕರಾರು ಮಾಡಿದರೆ ಅಂತಹವರ ವಿರುದ್ಧ ದೂರು ನೀಡಿ, ಕ್ರಮ ಕೈಗೊಂಡು ರಸ್ತೆ ಕಾಮಗಾರಿ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖಂಡರಾದ ರವೀಂದ್ರ ಪೂಜಾರಿ, ಸಂಜಯ ತಳವಲಕರ, ಮುಕುಂದ ಪೂಜಾರಿ, ಪ.ಪಂ ಅಧ್ಯಕ್ಷ ಉತ್ಕರ್ಷ ಪಾಟೀಲ ಬಾಳು ಭಜಂತ್ರಿ, ಚಿದಾನಂದ ಮಾಳಿ, ವೀರಭದ್ರ ಕಟಗೇರಿ, ಪ್ರಕಾಶ ಮಾಳಿ ಎಇಇ ಮಲ್ಲಿಕಾರ್ಜುನ ಮಗದುಮ್ಮ ಗುತ್ತಿಗೆದಾರರಾದ ಬಸವರಾಜ ಮಗದುಮ್ಮ, ಬಸವಪ್ರಸಾದ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.