ADVERTISEMENT

ರಾಮದುರ್ಗ: ನದಿಗೆ ಹಾರಿದ್ದ ತಾಯಿ, ಮಗುವಿನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 14:28 IST
Last Updated 19 ಸೆಪ್ಟೆಂಬರ್ 2022, 14:28 IST
   

ರಾಮದುರ್ಗ (ಬೆಳಗಾವಿ ಜಿಲ್ಲೆ): ಮೂರು ದಿನಗಳ ಹಿಂದೆ ಪಟ್ಟಣದ ಕಿರು ಸೇತುವೆ ಬಳಿ ನದಿಗೆ ಹಾರಿದ್ದ ತಾಯಿ ಹಾಗೂ ಮಗುವಿನ ಶವ ಸೋಮವಾರ, ತಾಲ್ಲೂಕಿನ ಕೊಳಚಿ ಡ್ಯಾಮ್‌ ಬಳಿ ಪತ್ತೆಯಾಗಿವೆ.

ಕುಟುಂಬ ಕಲಹದಿಂದ ಬೇಸತ್ತ ರುದ್ರವ್ವ ಬಸವರಾಜ ಬನ್ನೂರು (30) ಅವರು ತಮ್ಮ 19 ತಿಂಗಳ ಗಂಡುಮಗು ಶಿವಲಿಂಗಪ್ಪನನ್ನು ಎತ್ತಿಕೊಂಡು ನದಿಗೆ ಹಾರಿದ್ದರು. ನಿರಂತರ ಮಳೆಯಿಂದ ಮಲಪ್ರಭಾ ನದಿ ನೀರು ಉಕ್ಕೇರಿ ಹರಿಯುತ್ತಿರುವ ಕಾರಣ, ನೋಡ ನೋಡುತ್ತಿದ್ದಂತೆಯೇ ದೇಹಗಳು ಕಣ್ಮರೆಯಾಗಿದ್ದವು. ಮೂರು ದಿನಗಳಿಂದ ಹುಡುಕಾಟ ನಡೆದಿತ್ತು.

ಕೊಳಚಿ ಡ್ಯಾಮ್‌ ಸಮೀಪದ ನೀರಿನಲ್ಲಿ ತಾಯಿ ಹಾಗೂ ಮಗುವಿನ ಶವ ತೇಲುತ್ತುರುವುದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಎಸ್‌ಡಿ‌ಆರ್‌ಎಫ್‌ ತಂಡದ ಸಿಬ್ಬಂದಿ ಶವಗಳನ್ನು ಹೊರತೆಗೆದರು. ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು.

ADVERTISEMENT

ಪತಿ– ಪ‍ತ್ನಿ ಮಧ್ಯೆ ಉಂಟಾದ ಜಗಳದಿಂದ ರುದ್ರವ್ವ ಅವರು ಕೆಲ ತಿಂಗಳಿಂದ ತವರೂರು ಇಡಗುಂಡಿಗೆ ಹೋಗಿದ್ದರು. ಸೆ. 17ರಂದು ಪತಿ ಬಸವರಾಜ ಪತ್ನಿಯನ್ನು ಸಮಾಧಾನ ಪಡಿಸಿ, ಹಿರಿಯರ ಸಮ್ಮುಖದಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದರು. ರಾಮದುರ್ಗ ಬಸ್‌ ನಿಲ್ದಾಣದ ಬಳಿ ಆಟೊದಿಂದ ಇಳಿದು ಚಾಲಕನಿಗೆ ಹಣ ಕೊಡುತ್ತಿದ್ದಾಗಲೇ, ರುದ್ರವ್ವ ಅಲ್ಲಿಂದ ಪರಾರಿಯಾಗಿದ್ದರು. ಕೆಲವೇ ನಿಮಿಷಗಳಲ್ಲಿ ಮಲಪ್ರಭಾ ಸೇತುವೆ ಬಳಿ ಬಂದು ಮಗುವಿನ ಸಮೇತ ನದಿಗೆ ಹಾರಿದರು. ಇದನ್ನು ಕಂಡ ಜನ ಠಾಣೆಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

–––

ಗೃಹಿಣಿ ಆತ್ಮಹತ್ಯೆ: ಪತಿ ಸೇರಿ ಮೂವರ ಬಂಧನ

ಬೆಳಗಾವಿ: ತಾಲ್ಲೂಕಿನ ಹಾಲಭಾವಿಯಲ್ಲಿ ಈಚೆಗೆ ವರದಕ್ಷಿಣೆ ಕಿರುಕುಳ ನೀಡಿ ಗೃಹಿಣಿ ಸಾವಿಗೆ ಕಾರಣವಾದ ಆರೋಪದ ಮೇರೆಗೆ, ಪತಿ ಸೇರಿ ಮೂವರನ್ನು ಸೋಮವಾರ ಬಂಧಿಸಲಾಗಿದೆ.

ಸೆ. 11ರಂದು ರೇಣುಕಾ ಎನ್ನುವವರು ಮನೆಯಲ್ಲಿ ನೇಣಿಗೆ ಶರಣಾದರು. ಅವರ ಪತಿ ಭರಮಾ ಮುಶಪ್ಪ ನಾಯಿಕ ಇವರ ಸಹೋರರಾದ ಹಾಲಪ್ಪ ಹಾಗೂ ಯಲ್ಲಪ್ಪ ಬಂಧಿತರು. ಇಬ್ಬರು ಮಹಿಳೆಯರ ಮೇಲೂ ದೂರು ದಾಖಲಿಸಲಾಗಿದ್ದು ಅವರು ತಲೆಮರೆಸಿಕೊಂಡಿದ್ದಾರೆ. ಈ ಮೂವರೂ ಅಥಣಿ, ಪಾಶ್ಚಾಪುರ ಹಾಗೂ ಐನಾಪುರದಲ್ಲಿ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರೇಣುಕಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೊದಲು ಪ್ರಕರಣ ದಾಖಲಾಗಿತ್ತು. ಆದರೆ, ಈ ಸಾವಿನ ಬಗ್ಗೆ ಅನುಮಾನವಿದೆ, ವರದಕ್ಷಿಣೆ ಕಿರುಕುಳ ನೀಡಿ ಸಾವಿಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿ ಮಹಿಳೆಯ ಕುಟುಂಬವರು ಹಾಗೂ ಊರಿನ ಜನ ಉಗ್ರ ಪ್ರತಿಭಟನೆ ಮಾಡಿದ್ದರು.

ಮಹಿಳೆ ತವರು ಮನೆಯವರು ಕಾಕತಿ ಪೊಲೀಸ್‌ ಠಾಣೆಯಲ್ಲಿ ವರಕ್ಷಿಣೆ ಕಿರುಕುಳ ದೂರು ಕೂಡ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.