ಬೆಳಗಾವಿ: ‘ನನ್ನ ಪುತ್ರ ರಾಹುಲ್ ಹಾಗೂ ಪುತ್ರಿ ಪ್ರಿಯಾಂಕಾ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.
ಇಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ನಿಟ್ಟಿನಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ. ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಿದ್ದೇನೆ. ವ್ಯಾಸಂಗ ಮುಗಿದ ನಂತರ ಅವರು ಅಧಿಕೃತವಾಗಿ ರಾಜಕೀಯ ಕ್ಷೇತ್ರಕ್ಕೆ ಬರಲಿದ್ದಾರೆ. ಜನರ ಒಡನಾಟದಲ್ಲಿರಬೇಕು ಮತ್ತು ಅವರ ಕಷ್ಟ–ಸುಖಗಳಲ್ಲಿ ಭಾಗಿಯಾಗಬೇಕು ಎಂಬ ಆಸೆ ಅವರಿಗೂ ಇದೆ’ ಎಂದರು.
‘30 ವರ್ಷದಿಂದ ರಾಜಕೀಯದಲ್ಲಿ ದುಡಿದು ವರ್ಚಸ್ಸು ಬೆಳೆಸಿಕೊಂಡಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗಲು ಅವರು ರಾಜಕೀಯಕ್ಕೆ ಬರಬೇಕಾಗುತ್ತದೆ. ಸಮಾಜ, ಪಕ್ಷ ಹಾಗೂ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಅವರಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ. ರಾಜಕೀಯೇತರ ಸೇವಾ ಕಾರ್ಯಕ್ರಮಗಳಲ್ಲಿ ಅವರು ಈಗಾಗಲೇ ಭಾಗವಹಿಸುತ್ತಿದ್ದಾರೆ. ಮೊದಲು ಸಮಾಜ ಸೇವೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿಕೊಟ್ಟಿದ್ದೇನೆ’ ಎಂದು ಹೇಳಿದರು.
‘ಸಿದ್ಧಾಂತದ ತಳಹದಿಯಲ್ಲಿ ನಾನು ರಾಜಕಾರಣ ಮಾಡಿದ್ದೇನೆ. ಜನರು, ಸಮಾಜದ ಪರವಾಗಿ ಹೋರಾಡಿದ್ದೇನೆ. ಜಾತಿ, ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇನೆ. ಇದನ್ನು ಅವರು ಮುಂದುವರಿಸಬೇಕು. ಈ ನಿಟ್ಟಿನಲ್ಲಿ ತರಬೇತಿ ನೀಡುತ್ತಿದ್ದೇನೆ. ಅವರಿಗೆ ನೇರವಾಗಿ ರಾಜಕೀಯಕ್ಕೆ ಪ್ರವೇಶಿಸಲು ಬಿಟ್ಟಿಲ್ಲ. ಬೇರೆ ರಾಜಕಾರಣಿಗಳು, ಶಾಸಕರು ಹಾಗೂ ಸಚಿವರು ಮಕ್ಕಳು ಅಧಿಕಾರದಲ್ಲಿಲ್ಲದಿದ್ದರೂ ವ್ಯವಸ್ಥೆ ನಿಯಂತ್ರಿಸುತ್ತಿದ್ದಾರೆ. ಆದರೆ, ನನ್ನ ಮಕ್ಕಳ ವಿಷಯದಲ್ಲಿ ಹೀಗಾಗದಂತೆ ನೋಡಿಕೊಂಡಿದ್ದೇನೆ. ಈಗ ರಾಜಕೀಯೇತರ ಕಾರ್ಯಕ್ರಮಗಳಲ್ಲಿ ಮಾತ್ರವೇ ಅವರು ಭಾಗವಹಿಸುತ್ತಿದ್ದಾರೆ. ಇನ್ನೂ ಅವರಿಗೆ ಅನುಭವ ಬೇಕಾಗಿದೆ. ಆದರೆ, ನಾವು ಪಟ್ಟಷ್ಟು ಕಷ್ಟ ಅವರಿಗೆ ಆಗುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.