ADVERTISEMENT

‘ಹಿಂದೂ ಎಂಬುದು ಜಗತ್ತಿನ ಪ್ರಾಚೀನ ಸಂಸ್ಕೃತಿ’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 8:35 IST
Last Updated 17 ನವೆಂಬರ್ 2022, 8:35 IST
ಯಮಕನಮರಡಿಯಲ್ಲಿ ನಡೆದ ಸಮಾವೇಶದಲ್ಲಿ ಅಪಾರ ಜನರು ಪಾಲ್ಗೊಂಡಿದ್ದರು
ಯಮಕನಮರಡಿಯಲ್ಲಿ ನಡೆದ ಸಮಾವೇಶದಲ್ಲಿ ಅಪಾರ ಜನರು ಪಾಲ್ಗೊಂಡಿದ್ದರು   

ಯಮಕನಮರಡಿ (ಬೆಳಗಾವಿ): ‘ಹಿಂದೂ ಎನ್ನುವುದು ಜಗತ್ತಿನ ಪ್ರಾಚೀನ ಸಂಸ್ಕೃತಿ ಎಂದು ಡಾ.ಅಂಬೇಡ್ಕರ್‌ ಅವರೇ ಹೇಳಿದ್ದಾರೆ. ಅವರ ಹೆಸರು ಹೇಳಿಕೊಂಡು ಬೆಳೆದವರು ಅರ್ಥ ಮಾಡಿಕೊಳ್ಳಿ’ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿ ಬುಧವಾರ ಆಯೋಜಿಸಿದ್ದ ‘ನಾನೂ ಹಿಂದೂ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಹಿಂದೂ ಧರ್ಮವನ್ನು ನುಂಗಬೇಕು ಎಂದು ಬಂದಿದ್ದ ರಾಕ್ಷಸರಾಜ ರಾವಣ,ಕಂಸರನ್ನು ಈ ಧರ್ಮವೇ ನುಂಗಿದೆ. ಘೋರಿ- ಘಜನಿಯಂಥ ಆಕ್ರಮಿಗಳನ್ನು ನುಂಗಿದೆ. ಬಾಬರ್‌ನಿಂದ ಹಿಡಿದು ಔರಂಗಜೇಬನ ವರೆಗೆ ಟಿಪ್ಪು ಸುಲ್ತಾನನಿಂದ ಹಿಡಿದು ಹಜರತನವರೆಗೆ ಎಲ್ಲರನ್ನೂ ಹಿಂದೂ ಧರ್ಮ ಹೊಸಕಿಹಾಕಿದೆ. ಇನ್ನು ಈ ಕೊತವಾಲಗಳು, ಸಾವಕಾರಗಳು ಯಾವ ಲೆಕ್ಕ’ ಎಂದರು.

ADVERTISEMENT

‘ಈಗೀಗ ಚರ್ಚ್‌ಗಳ ಮುಂದೆ ಗರುಡ ಗಂಬಗಳು ಬಂದಿವೆ. ಉರುಳು ಸೇವೆ, ಜಾತ್ರೆ ಆರಂಭಿಸುವ ಮೂಲಕ ಸ್ವತಃ ಚರ್ಚ್‌ಗಳು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿವೆ’ ಎಂದರು.

ಹಿರೇಹಡಗಲಿಯ ಹಾಲಸಂಸ್ಥಾನ ಮಠದ ಅಭಿನವ ಹಾಲಸ್ವಾಮೀಜಿ, ಹುಕ್ಕೇರಿಯ ಕ್ಯಾರಗುಡ್ಡ ಅಭಿನವ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾರುತಿ ಅಷ್ಠಗಿ,
ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶಶಿಕಾಂತ ನಾಯಕ್, ಬಿಜೆಪಿ ಚಿಕ್ಕೋಡಿ ಘಟಕ ಅಧ್ಯಕ್ಷ ಡಾ.ರಾಜೇಶ್ ನೇರ್ಲಿ, ಎಸ್ಟಿ ಘಟಕ ಅಧ್ಯಕ್ಷ ಬಸವರಾಜ ಹುಂದ್ರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.