ಉಗರಗೋಳ: ನವರಾತ್ರಿಯ 5ನೇ ದಿನವಾದ ಸೋಮವಾರ ಸುಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ನಾನಾ ಭಾಗಗಳಿಂದ ಭಕ್ತಸಾಗರವೇ ಹರಿದು ಬಂದಿತ್ತು. ‘ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ’ ಎಂಬ ಜೈಕಾರ ಮೊಳಗಿತು.
ತಂಪಾದ ವಾತಾವರಣ ಮತ್ತು ಆಗಾಗ ಬೀಳುತ್ತಿದ್ದ ಮಳೆಯ ನಡುವೆಯೂ ಭಕ್ತರು ಸರದಿ ಸಾಲಿನಲ್ಲಿ ಬಂದು ಯಲ್ಲಮ್ಮ ದೇವಿಯ ದರ್ಶನ ಪಡೆದರು.
ಕೋವಿಡ್ ಭೀತಿ ನಡುವೆಯೂ ಏಳುಕೊಳ್ಳದ ನಾಡಿನಲ್ಲಿ ನವರಾತ್ರಿ ಉತ್ಸವ ಸಡಗರದಿಂದ ನಡೆಯುತ್ತಿದೆ. ಕರ್ನಾಟಕದೊಂದಿಗೆ, ಗೋವಾ, ತಮಿಳನಾಡು, ಆಂಧ್ರ ಮತ್ತು ನೆರೆಯ ಮಹಾತಾಷ್ಟ್ರದಿಂದಲೂ ಭಕ್ತರು ಯಲ್ಲಮ್ಮನ ಸನ್ನಿಧಿಗೆ ಬಂದು ದರ್ಶನಾಶೀರ್ವಾದ ಪಡೆಯುತ್ತಿದ್ದಾರೆ. ಹಲವು ಭಕ್ತರು ಭಾನುವಾರ ರಾತ್ರಿಯೇ ಯಲ್ಲಮ್ಮನಗುಡ್ಡಕ್ಕೆ ಬಂದಿದ್ದರು.
ಸೋಮವಾರ ಬೆಳಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಯಲ್ಲಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿ, ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಲಾಯಿತು.
ನವರಾತ್ರಿ ವೇಳೆ ಯಲ್ಲಮ್ಮನಗುಡ್ಡಕ್ಕೆ ಬರುವ ಪ್ರತಿ ಭಕ್ತರು ದೀಪಕ್ಕೆ ಎಣ್ಣೆ ಹಾಕುವ ಪದ್ಧತಿ ರೂಢಿಯಲ್ಲಿದೆ. ಭಕ್ತರಿಗೆ ಅನುಕೂಲ ಆಗಲೆಂದು 6 ಕಡೆಗಳಲ್ಲಿ ದೀಪಗಳನ್ನು ಇಡಲಾಗಿದೆ. ಭಕ್ತರು ನಿಗದಿತ ಸ್ಥಳದಲ್ಲೇ ಎಣ್ಣೆ ಹಾಕುವುದು ಕಂಡುಬಂತು. ಕೋವಿಡ್ ಮಾರ್ಗಸೂಚಿ ಪಾಲಿಸುವ ಕುರಿತು ಸಿಬ್ಬಂದಿಯು ಧ್ವನಿವರ್ಧಕದಲ್ಲಿ ತಿಳಿಸುತ್ತಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.