ಬೆಳಗಾವಿ: ‘ಯುವಜನರಲ್ಲಿ ಸಾಂಸ್ಕೃತಿಕ ಅಭಿರುಚಿ ಬೆಳೆಸುವ ಅಗತ್ಯವಿದೆ’ ಎಂದುನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಸ್. ಇಂಚಲ ಹೇಳಿದರು.
ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕ್ರಿಯಾಶೀಲ ಬಳಗದಿಂದ ಈಚೆಗೆ ಆಯೋಜಿಸಿದ್ದ ‘ಪ್ರತಿಭೆಗೊಂದು ಉಚಿತ ವೇದಿಕೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾಣುವುದಿಲ್ಲ. ನಿವೃತ್ತಿ ಹೊಂದಿದವರೇ ಕಾಣಸಿಗುತ್ತಾರೆ. ಈ ಸ್ಥಿತಿ ಬದಲಾಗಬೇಕು. ಯುವಕ, ಯುವತಿಯರು ಭಾಗವಹಿಸುವಂತಾಗಬೇಕು’ ಎಂದರು.
ಹಿರಿಯ ವೈದ್ಯ ಡಾ.ಎಚ್.ಬಿ. ರಾಜಶೇಖರ ಮಾತನಾಡಿ, ‘ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಅದನ್ನು ಬಳಸಿಕೊಳ್ಳಬೇಕು. ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಕ್ರಿಯಾಶೀಲ ಬಳಗ ಒದಗಿಸುತ್ತಿರುವುದು ಶ್ಲಾಘನೀಯವಾಗಿದೆ’ ಎಂದು ಹೇಳಿದರು.
ಹಾಸ್ಯಕೂಟ ಸಂಚಾಲಕ ಗುಂಡೇನಟ್ಟಿ ಮಧುಕರ ಮಾತನಾಡಿ, ‘ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದು ಕ್ರಿಯಾಶೀಲ ಬಳಗದ ಮುಖ್ಯ ಉದ್ದೇಶವಾಗಿದೆ. ಪ್ರತಿ ತಿಂಗಳ ಕೊನೆಯ ಭಾನುವಾರ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.
ಶ್ರೀಪತಿ ದೇವ, ವಿದ್ಯಾ ಜಹಗೀರದಾರ, ಸಂತೋಷ ನಾಯಕ, ಪರಶುರಾಮ ತೆಗ್ಗಿನಮನಿ, ವಿನಯ ಮಠಪತಿ, ಬಸವರಾಜ ಹಡಪದ, ಲಿಂಗರಾಜ ಶೆಟ್ಟಣ್ಣವರ, ಅದ್ವಿತಾ, ಶಿವರಾಜ ಕುಪಾಟಿ, ಐಶ್ವರ್ಯಾ ತುಬುಚಿ, ರೋಹಿಣಿ, ಫಕೀರಪ್ಪ ಕಿಲ್ಲೇದ, ರೋಹಿಣಿ ಹಣಬರಟ್ಟಿ, ಸೋಮನಾಥ ಮುಗಳಿ, ಪ್ರಿಯಾಂಕಾ, ಅರ್ಪಿತಾ, ಶ್ರೀಪತಿ ದೇವ ಕಾರ್ಯಕ್ರಮ ನೀಡಿದರು.
ಬಳಗದ ಆರ್.ಬಿ. ಕಟ್ಟಿ ಇದ್ದರು. ಕೆ. ಮಲ್ಲಿಕಾರ್ಜುನ ನಿರೂಪಿಸಿದರು. ಕೆ. ತಾನಾಜಿ ಸ್ವಾಗತಿಸಿದರು. ದುರುದುಂಡಯ್ಯ ಬಾವಿಮನಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.