ಬೆಳಗಾವಿ: ‘ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಮಳೆಗಾಲದ ಸಾಮಾನ್ಯ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
‘ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿವೆ. ಅನೇಕ ವೈದ್ಯರು ಕ್ಲಿನಿಕ್ಗಳನ್ನು ಬಂದ್ ಮಾಡುತ್ತಿದ್ದಾರೆ. ಹೀಗಾದರೆ ಸಾಮಾನ್ಯರು ಸಾಯುವ ಸ್ಥಿತಿ ಬರುತ್ತದೆ. ಕನ್ನಡ ಹೋರಾಟಗಾರ್ತಿ ಜುಲೈ 15ರಂದು ನಿಧನರಾದರು. ಖಾಸಗಿ ಆಸ್ಪತ್ರೆಯವರು ಅವರಿಗೆ ತುರ್ತಾಗಿ ಚಿಕಿತ್ಸೆ ನೀಡದೇ ಜಿಲ್ಲಾ ಆಸ್ಪತ್ರೆಯಿಂದದ ‘ನೋ ಕೋವಿಡ್’ ಪ್ರಮಾಣಪತ್ರ ತರಲು ಹೇಳಿದ್ದರು. ತರಲು ವಿಳಂಬವಾಗಿದ್ದರಿಂದ ಅವರು ಮೃತರಾದರು’ ಎಂದು ದೂರಿದರು.
‘ಹಲವರು ಇಂತಹ ಸಮಸ್ಯೆ ಎದುರಿಸಿದ್ದಾರೆ. ಎರಡು–ಮೂರು ಆಸ್ಪತ್ರೆಗಳು ಚಿಕಿತ್ಸೆ ನೀಡದೇ ವಾಪಸ್ ಕಳುಹಿಸಿದ್ದರಿಂದ ಹೋಟೆಲ್ ಉದ್ಯಮಿಯೊಬ್ಬರು ಸಾವಿಗೀಡಾದರು. ಕ್ಲಿನಿಕ್ ಬಂದ್ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರವಾನಗಿ ರದ್ದುಗೊಳಿಸಿ ಬಿಸಿ ಮುಟ್ಟಿಸಬೇಕು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಕ್ರಿಯಿಸಿದ ಸಚಿವರು, ‘ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುವಂತೆ ತಾಕೀತು ಮಾಡಲಾಗುವುದು’ ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.