ಬೆಳಗಾವಿ: ‘ವಿವಿಧ ಬಡಾವಣೆಗಳು ಹಾಗೂ ಆಸ್ಪತ್ರೆಗಳ ಆವರಣದಿಂದ ಸಂಗ್ರಹಿಸಿ ತಂದ ತ್ಯಾಜ್ಯವನ್ನು ಇಲ್ಲಿನ ಜಾಧವ ನಗರದ ಜನವಸತಿ ಪ್ರದೇಶದಲ್ಲಿನ ರಸ್ತೆಯಲ್ಲೇ ವಿಂಗಡಿಸಿ, ಮತ್ತೆ ಬೇರೆ ವಾಹನಕ್ಕೆ ತುಂಬಿ ಸಾಗಿಸುವ ಕೆಲಸವನ್ನು ನಗರಪಾಲಿಕೆ ಸಿಬ್ಬಂದಿ ಮಾಡುತ್ತಿದ್ದಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ಬಡಾವಣೆಯ ನಿವಾಸಿ ಪ್ರಲ್ಹಾದ ಅಂಬೇಕರ ತಿಳಿಸಿದ್ದಾರೆ.
‘ತ್ಯಾಜ್ಯವನ್ನು ವಿಂಗಡಿಸಿ ಪುನಃ ಬೇರೆ ವಾಹನಕ್ಕೆ ತುಂಬಿ ಸಾಗಿಸುತ್ತಾರೆ. ಇದರಲ್ಲಿ ಮನೆಗಳ ತ್ಯಾಜ್ಯ, ಪ್ಲಾಸ್ಟಿಕ್, ಆಹಾರ ತ್ಯಾಜ್ಯ, ಬಳಸಿದ ಟಿಸ್ಯೂ, ಮಾಸ್ಕ್, ಡೈಪರ್ ಮೊದಲಾದವು ಇರುತ್ತವೆ. ಅವುಗಳನ್ನು ರಸ್ತೆಯಲ್ಲಿ ಚೆಲ್ಲಿ ವಿಂಗಡಿಸುವಾಗ ಬೀದಿ ನಾಯಿಗಳು ಎಳೆದಾಡಿ ಅಲ್ಲಲ್ಲಿ ಹರಡುತ್ತವೆ. ಆಹಾರ ಹುಡುಕಿ ಎಳೆದುಕೊಂಡು ಹೋಗುತ್ತವೆ. ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯ ಹಾರಿ ಮನೆಗಳ ಕಾಂಪೌಂಡ್ ಒಳಗೆ ಬಂದು ಬೀಳುವ ನಿದರ್ಶನಗಳೂ ಇವೆ. ಇದರಿಂದಾಗಿ ಸಮುದಾಯದಲ್ಲಿ ಸಾಂಕ್ರಾಮಿಕ ರೋಗ ಹರಡಬಹುದಾದ ಸಾಧ್ಯತೆ ದಟ್ಟವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ಮಹಾನಗರ ಪಾಲಿಕೆ ಅಧಿಕಾರಿಗಳು ಇತ್ತ ಕೂಡಲೇ ಗಮನಹರಿಸಬೇಕು. ತ್ಯಾಜ್ಯ ವಿಂಗಡಿಸುವ ಕಾರ್ಯವನ್ನು ಜನವಸತಿ ಪ್ರದೇಶದ ಬದಲಿಗೆ ಹೊರವಲಯದಲ್ಲಿ ಮಾಡುವಂತೆ ಸಿಬ್ಬಂದಿಗೆ ಸೂಚಿಸಬೇಕು. ಮಾರಕ ಕೊರೊನಾ ಭೀತಿ ಇರುವುದರಿಂದಾಗಿ ಎಚ್ಚರಿಕೆ ವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.