ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಜಮೀನು ಖರೀದಿಯ ನೋಂದಣಿ ಮಾಡಿಕೊಡಲು ₹30 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದ ಚಿಕ್ಕೋಡಿ ಉಪನೋಂದಣಾಧಿಕಾರಿ ಜಿ.ಪಿ. ಶಿವರಾಜು, ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಹಾರಾಷ್ಟ್ರದ ಇಚಲಕರಂಜಿಯ ರಾಜು ಲಕ್ಷ್ಮಣ ಪಾಚ್ಚಾಪುರೆ ಎನ್ನುವವರು ಚಿಕ್ಕೋಡಿ ತಾಲ್ಲೂಕಿನ ಡೊಣೆವಾಡ ಗ್ರಾಮದಲ್ಲಿ ಜಮೀನು ಖರೀದಿಸಿದ್ದರು. ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕವೂ ಸೇರಿದಂತೆ ಎಲ್ಲವನ್ನು ತುಂಬಿದ್ದರು. ಆದರೆ, ಜಮೀನನ್ನು ಅವರ ಹೆಸರಿಗೆ ಮಾಡಿಕೊಡಲು ಉಪನೋಂದಣಾಧಿಕಾರಿ ₹ 30 ಸಾವಿರ ಲಂಚ ಕೇಳಿದ್ದರು. ಈ ಬಗ್ಗೆ ರೈತ ರಾಜು ಅವರು ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಯಶೋದಾ ವಂಟಗೂಡಿ ತಿಳಿಸಿದ್ದಾರೆ.
ಶಿವರಾಜು ಅವರು ಮಂಗಳವಾರ ಲಂಚದ ಹಣ ತೆಗೆದುಕೊಳ್ಳುವ ವೇಳೆ ಅವರನ್ನು ಹಣದ ಸಮೇತ ಹಿಡಿಯಲಾಗಿದೆ. ಈ ಕೃತ್ಯಕ್ಕೆ ಸಹಕರಿಸಿದ ಉಪನೋಂದಣಾಧಿಕಾರಿಯ ಸಹಾಯಕ ಹುಸೇನ್ ಇಮಾಮ್ಸಾಬ್ ರೆಹಮಾನ್ಸಾಬ್ ಹಾಗೂ ಮಧ್ಯವರ್ತಿ, ಕಂಪ್ಯೂಟರ್ ಆಪರೇಟರ್ ಸಂದೀಪ ಶಂಕರ ಪಾಟೀಲ ಅವರನ್ನೂ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.