ADVERTISEMENT

ದೇಗುಲಗಳಿಗೆ ಆಡಳಿತಾಧಿಕಾರಿಗಳ ನೇಮಕ: ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 9:54 IST
Last Updated 1 ಮಾರ್ಚ್ 2021, 9:54 IST

ಬೆಳಗಾವಿ: ‘ದೇಗುಲಗಳಿಗೆ ಆಡಳಿತಾಧಿಕಾರಿಗಳ ನೇಮಕ ಆದೇಶ ಹಿಂಪಡೆಯಬೇಕು’ ಎಂದು ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

‘ಜಿಲ್ಲೆಯ 16 ದೇವಸ್ಥಾನಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾಡಳಿತ ಈಚೆಗೆ ಆದೇಶ ಹೊರಡಿಸಿದೆ. ಇದು ದೇವಸ್ಥಾನಗಳ ಭಕ್ತರಿಗಲ್ಲದೆ ಹಿಂದೂ ಧರ್ಮೀಯರಿಗೆ ತೀವ್ರ ಅಸಮಾಧಾನ ಮತ್ತು ಅತೃಪ್ತಿ ಉಂಟು ಮಾಡಿದೆ. ಜಿಲ್ಲಾಡಳಿತದ ಈ ಕ್ರಮವು ದೇವಸ್ಥಾನಗಳಲ್ಲಿ ನೇರ ಹಸ್ತಕ್ಷೇಪ ಮಾಡಿದಂತಾಗಿದೆ’ ಎಂದು ಹೇಳಿದ್ದಾರೆ.

‘ಕಪಿಲೇಶ್ವರ ದೇವಸ್ಥಾನ, ವಡಗಾವಿಯ ಎರಡು ಬನಶಂಕರಿ ದೇವಸ್ಥಾನಗಳು, ಸವದತ್ತಿ ತಾಲ್ಲೂಕು ಮುನವಳ್ಳಿಯ ಪಂಚಲಿಂಗೇಶ್ವರ ದೇವಸ್ಥಾನ, ಅಥಣಿ ತಾಲ್ಲೂಕಿನ ಕಿಳೇಗಾಂವ ಬಸವೇಶ್ವರ ದೇವಸ್ಥಾನ ಸಹಿತ 16 ದೇವಸ್ಥಾನಗಳನ್ನು ಜಿಲ್ಲಾಡಳಿತ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆ. ಇನ್ನೂ 25 ದೇವಸ್ಥಾನಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ನಡೆದಿದೆ ಎಂದು ಗೊತ್ತಾಗಿದೆ. ಈ ಕ್ರಮವು ಭಕ್ತರು ಹಾಗೂ ಜನ ವಿರೋಧಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ರಾಜ್ಯ ಸರ್ಕಾರವ ಪೂರ್ವಾನುಮತಿಯಿಂದಲೇ ಜಿಲ್ಲಾಡಳಿತವು ಈ ಕ್ರಮ ಕೈಗೊಂಡಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆಡಳಿತಾಧಿಕಾರಿ ನೇಮಕ ಆದೇಶ ವಾಪಸ್ ಪಡೆಯಲು ಆದೇಶಿಸಬೇಕು’ ಎಂದು ಮಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ADVERTISEMENT

‘ಒಂದು ವೇಳೆ ರಾಜ್ಯ ಸರ್ಕಾರವು ಆದೇಶ ವಾಪಸ್ ಪಡೆಯದಿದ್ದರೆ ದೇವಸ್ಥಾನಗಳು ಹಾಗೂ ಅವುಗಳ ಭಕ್ತರು ಪ್ರತಿಭಟನೆಯ ಹೋರಾಟದ ಮಾರ್ಗ ಅನುಸರಿಸುವುದು ಅನಿವಾರ್ಯವಾಗುತ್ತದೆ. ಭಕ್ತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸೂಕ್ತ ಕ್ರಮ ಕೈಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.