ಬೆಳಗಾವಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಗಣನೀಯವಾಗಿ ಸುಧಾರಿಸುವ ನಿಟ್ಟಿನಲ್ಲಿ ಈಗಾಗಲೇ ‘ತಿಂಗಳ ಬುತ್ತಿ’ ಎಂಬ ಮಾಸಿಕ ಸಂಚಿಕೆಯನ್ನು 2022ರ ಆಗಸ್ಟ್ನಿಂದ ನೀಡಲಾಗುತ್ತಿದೆ. ಒಂದೊಂದೇ ತಿಂಗಳ ಬುತ್ತಿಯನ್ನು ಇಡಿಯಾಗಿ ಕೊಡುವುದಕ್ಕಿಂತಲೂ ಬಿಡಿಯಾಗಿ ಕೊಟ್ಟರೆ ಅದರ ರುಚಿ ಹಾಗೂ ಪ್ರಭಾವ ಇನ್ನೂ ಹೆಚ್ಚಾಗುವುದು ಎನ್ನುವ ಕಾರಣಕ್ಕೆ ‘ವಾರದ ಮಿತ್ರ’ ಎಂಬ ನವೀನ ಪರಿಕಲ್ಪನೆ ತರಲಾಗಿದೆ.
ಎಲ್ಲ ವಿದ್ಯಾರ್ಥಿಗಳ ಜ್ಞಾನ ಶಕ್ತಿ, ಗ್ರಹಣ ಶಕ್ತಿ ಒಂದೇ ತೆರನಾಗಿರದೇ ವ್ಯತ್ಯಾಸವಾಗಿರುತ್ತದೆ. ಹಾಗೆಯೇ ಕಲಿಕಾ
ಸಾಮರ್ಥ್ಯವೂ ಭಿನ್ನ ಭಿನ್ನವಾಗಿರುವುದು ಸಾಮಾನ್ಯ. ಕಲಿಕೆಯಲ್ಲಿ ಹಿಂದುಳಿದವರು, ಮುಂದುವರಿದವರು ಎಂಬ ವ್ಯತ್ಯಾಸವು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಕಲಿಕೆಯಲ್ಲಿ ಹಿಂದುಳಿದವರು ಎಂಬ ಹಣೆಪಟ್ಟಿ ಮಕ್ಕಳಲ್ಲಿನ ಆತ್ಮವಿಸ್ವಾಸ ಹಾಗೂ ಉತ್ಸಾಹವನ್ನೇ ಕುಗ್ಗಿಸಬಹುದು. ಅದೂ ಅಲ್ಲದೇ ಪ್ರಸ್ತುತ 10ನೇ ತರಗತಿಯಲ್ಲಿ ಓದುವ ಮಕ್ಕಳು ಈ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ ಕೊರೊನಾ ಕಾರಣವಾಗಿ ಕಲಿಕೆ ಮೇಲೆ ಪ್ರತಿಕೂಲ ಪರಿಣಾಮವನ್ನು ಅನುಭವಿಸಿದ್ದಾರೆ.
ಈ ನಿಟ್ಟಿನಲ್ಲಿ ಎಲ್ಲ ಮಕ್ಕಳಿಗೂ ಅನ್ವಯಿಸುವಂತೆ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷಾ ದೃಷ್ಟಿಯಿಂದ ಸಾಮಾನ್ಯವಾಗಿ ಕೇಳಬಹುದಾಗಿರುವ ಬಹುನಿರೀಕ್ಷೀತ ಪ್ರಶ್ನೆಗಳನ್ನು ಪ್ರತಿದಿನ, ಪ್ರತಿ ವಿಷಯಕ್ಕೆ ಏಳು ಅಂಕಗಳ ಪ್ರಶ್ನೆಗಳನ್ನು ಮಾದರಿ ಉತ್ತರಗಳೊಂದಿಗೆ ಒಂದೊಂದು ವಾರಕ್ಕೆ ಪ್ರತ್ಯೇಕವಾಗಿ ನೀಡಲು ಮುಂದಾಗಿದೆ. ಎಲ್ಲ ಮಕ್ಕಳಿಗೂ ಅನುಕೂಲ ಆಗಲಿ ಎಂಬುದು ಇದರ ಉದ್ದೇಶ.
2023ರ ಪರೀಕ್ಷೆಯಲ್ಲಿ ಪ್ರತಿಶತ 100ರಷ್ಟು ಉತ್ತೀರ್ಣ ಫಲಿತಾಂಶವನ್ನು ಪಡೆಯಲು ಮಕ್ಕಳಿಗಾಗಿ ಪರಿಚಯಿಸುತ್ತಿರುವ ನವೀನ ಪರಿಕಲ್ಪನೆಯೇ ಈ ‘ವಾರದ ಮಿತ್ರ’.
ಇದನ್ನು ಈಗಾಗಲೇ ಎಲ್ಲ ವಲಯಗಳಲ್ಲೂ, ಎಲ್ಲರಿಗೂ ಮುಟ್ಟಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಇದು ಪರಿಣಾಮಕಾರಿ ಹೆಜ್ಜೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.