ADVERTISEMENT

ಸುರೇಶ ಅಂಗಡಿ ನಿಧನ: ಗಣ್ಯರ ಕಂಬನಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 3:37 IST
Last Updated 24 ಸೆಪ್ಟೆಂಬರ್ 2020, 3:37 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ಬಿಜೆಪಿ ಸೇರಲು ಕಾರಣವಾದವರು

ಆತ್ಮೀಯ ಸ್ನೇಹಿತರಾಗಿದ್ದ ಸುರೇಶ ಅಂಗಡಿ ಅವರ ಹಠಾತ್ ನಿಧನ ತುಂಬಾ ನೋವು ತಂದಿದೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ನಾವಿಬ್ಬರೂ ಪರಸ್ಪರ ಚರ್ಚೆ ಮಾಡಿ ಕೆಲಸ ಮಾಡುತ್ತಿದ್ದೆವು. ನಾನು ಬಿಜೆಪಿ ಸೇರಲು ಅಗಡಿಯವರೂ ಪ್ರಮುಖ ಕಾರಣಕರ್ತರು. ಕೋವಿಡ್ ಸೋಂಕು ವಿಪರೀತವಾಗಿ ಹರಡಿದ್ದ ಸಂದರ್ಭದಲ್ಲಿಯೂ ನಾನು ಮತ್ತು ಅವರು ಹಲವು ಬಾರಿ ಕಾರ್ಯಪಡೆ ನಡೆಸಿ, ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದ್ದೆವು.

-ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ADVERTISEMENT

ಬಿಜೆಪಿಯ ಆಧಾರ ಸ್ತಂಭವಾಗಿದ್ದರು

ನನ್ನ ದೀರ್ಘ ಕಾಲದ ಆತ್ಮೀಯ ಸ್ನೇಹಿತರಾಗಿದ್ದ ಸುರೇಶ ಅಂಗಡಿ ಅವರ ಅಕಾಲಿಕ ನಿಧನದ ಸುದ್ದಿಯನ್ನು ನನಗೆ ನಂಬಲಾಗುತ್ತಿಲ್ಲ. ನಿಜಕ್ಕೂ ಇದು ದಿಗ್ಬ್ರಮೆ ಮೂಡಿಸುವಂತಹ ದುರ್ದೈವದ ಸಂಗತಿಯಾಗಿದೆ. ಬಿಜೆಪಿಯ ಆಧಾರ ಸ್ತಂಭಗಳಲ್ಲಿ ಒಬ್ಬರಾಗಿದ್ದ ಅವರು, ಬೆಳಗಾವಿಯಿಂದ ಪ್ರತಿನಿಧಿಸಿ ಇತ್ತೀಚೆಗೆ ಕೇಂದ್ರ ಸಚಿವರಾಗಿದ್ದರು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅನೇಕ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ತಾವೊಬ್ಬ ಅತ್ಯಂತ ಸಮರ್ಥ ಹಾಗೂ ದೂರದರ್ಶಿತ್ವದ ನಾಯಕನಾಗುವ ಭರವಸೆಯನ್ನು ನಮ್ಮಲ್ಲಿ ಮೂಡಿಸಿದ್ದರು. ಕರ್ನಾಟಕಕ್ಕಂತೂ ಅನೇಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅನನ್ಯವಾಗಿದೆ.

-ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

ಹಲವು ಯೋಜನೆ ಹಾಕಿಕೊಂಡಿದ್ದರು

ಸುರೇಶ ಅಂಗಡಿ ಅವರು ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರು. ಅನುಷ್ಠಾನಕ್ಕೆ ಬೇಕಾದ ಕ್ರಮಗಗಳನ್ನೂ ಕೈಗೊಂಡಿದ್ದರು. ಸಜ್ಜನ ಹಾಗೂ ಮಾದರಿ ರಾಜಕಾರಣಿಯಾಗಿದ್ದರು. ಬೆಳಗಾವಿಗೆ ಹಾಗೂ ನಾಡಿಗೆ ಅವರ ಕೊಡುಗೆ ಅಪಾರ.

-ಬಾಬಾಗೌಡ ಪಾಟೀಲ, ರೈತ ಮುಖಂಡ

ಮಹತ್ವದ ಕೊಡುಗೆ ನೀಡಿದವರು

ಸುರೇಶ ಅಂಗಡಿ ಅವರ ನಿಧನದ ವಿಷಯ ಕೇಳಿ ಆಘಾತವಾಯಿತು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ 4 ಬಾರಿ ಆಯ್ಕೆಯಾಗಿ, ಕೇಂದ್ರದಲ್ಲಿ ಸಚಿವರಾಗಿ ಅವರು ಉತ್ತಮ ಕೆಲಸ ಮಾಡಿದ್ದರು. ಬೆಳಗಾವಿ ಸೇರಿದಂತೆ ರಾಜ್ಯಕ್ಕೆ ರೈಲ್ವೆ ಇಲಾಖೆಯಿಂದ ಹಲವು ಮಹತ್ವದ ಕೊಡುಗೆ ನೀಡಿದ್ದರು. ಶಿಕ್ಷಣ ಕ್ಷೇತ್ರಕ್ಕೂ ಅವರು ಅಪಾರ ಕೊಡುಗೆ ನೀಡಿದ್ದರು. ಅವರ ಅನಿರೀಕ್ಷಿತ ನಿಧನ ಇಡೀ ದೇಶಕ್ಕೆ ದೊಡ್ಡ ಆಘಾತ ನೀಡಿದೆ. ಅವರು ಬೆಳಗಾವಿಗೆ ಇನ್ನೂ ಏನಾದರೂ ದೊಡ್ಡ ಕೊಡುಗೆ ನೀಡಬೇಕೆಂದು ಕನಸು ಕಂಡಿದ್ದರು. ಆ ದಿಸೆಯಲ್ಲಿ ರೈಲ್ವೆ ಇಲಾಖೆ ಮೂಲಕ ಹಲವು ಕೆಲಸ ಮಾಡಿದ್ದರು.

ಲಕ್ಷ್ಮಿ ಹೆಬ್ಬಾಳಕರ, ಶಾಸಕಿ

ಎತ್ತರಕ್ಕೆ ಬೆಳೆದವರು

ಕೃಷಿ ಕುಟುಂಬದಿಂದ ಬಂದ ಸುರೇಶ ಅಂಗಡಿ ಅವರದು ಅದ್ವಿತೀಯ ಸಾಧನೆ. ಸಂಸದರಾಗಿ, ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಮಹತ್ವದ ಕೊಡುಗೆಗಳನ್ನು ಇಲ್ಲಿಗೆ ನೀಡಿದ್ದಾರೆ. ಎಲ್ಲರೊಂದಿಗೂ ಒಳ್ಳೆಯ ಸಂಬಂಧವನ್ನು ಅವರು ಹೊಂದಿದ್ದರು. ಕೋವಿಡ್‌–19 ಸಂದರ್ಭದಲ್ಲೂ ಅವರು ಬಹಳ ಸಂಚಾರ ಮಾಡಿ ಜನಸೇವೆಯಲ್ಲಿ ತೊಡಗಿದ್ದರು.

-ಅಶೋಕ ಚಂದರಗಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.