ADVERTISEMENT

ಸಕ್ಕರೆ ಚೀಲಗಳಿಗೆ ಪೂಜೆ ಫೆ.19ರಂದು

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಭಾಗಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 10:54 IST
Last Updated 18 ಫೆಬ್ರುವರಿ 2020, 10:54 IST
ಬೆಳಗಾವಿ ತಾಲ್ಲೂಕು ಕಾಕತಿ ಹೊರವಲಯದಲ್ಲಿರುವ ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ತಯಾರಿಸಿದ ಸಕ್ಕರೆ ಚೀಲಗಳೊಂದಿಗೆ  ಅಧ್ಯಕ್ಷ ಅವಿನಾಶ ಪೋತದಾರ ಮತ್ತು ಆಡಳಿತ ಮಂಡಳಿ ಸದಸ್ಯರು ಇದ್ದಾರೆ
ಬೆಳಗಾವಿ ತಾಲ್ಲೂಕು ಕಾಕತಿ ಹೊರವಲಯದಲ್ಲಿರುವ ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ತಯಾರಿಸಿದ ಸಕ್ಕರೆ ಚೀಲಗಳೊಂದಿಗೆ  ಅಧ್ಯಕ್ಷ ಅವಿನಾಶ ಪೋತದಾರ ಮತ್ತು ಆಡಳಿತ ಮಂಡಳಿ ಸದಸ್ಯರು ಇದ್ದಾರೆ   

ಬೆಳಗಾವಿ: ‘ತಾಲ್ಲೂಕಿನ ಕಾಕತಿಯಲ್ಲಿರುವ ಮಾರ್ಕಂಡೇಯ ಸಹಹಾರಿ ಸಕ್ಕರೆ ಕಾರ್ಖಾನೆ ಆರಂಭಗೊಂಡಿದ್ದು, ಮೊದಲನೇ ಹಂಗಾಮನ್ನು ಯಶಸ್ವಿಯಾಗಿ ಪೂರೈಸಿದ್ದು, ಇಲ್ಲಿ ತಯಾರಿಸಿದ ಸಕ್ಕರೆಯ ಚೀಲಗಳಿಗೆ ಪೂಜಾ ಕಾರ್ಯಕ್ರಮವನ್ನು ಫೆ. 19ರಂದು ಮಧ್ಯಾಹ್ನ 3ಕ್ಕೆ ಆಯೋಜಿಸಲಾಗಿದೆ’ ಎಂದು ಅಧ್ಯಕ್ಷ ಅವಿನಾಶ ಪೋತದಾರ ತಿಳಿಸಿದರು.

‘ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಪೂಜೆ ನೆರವೇರಿಸುವರು. ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ, ಶಾಸಕರಾದ ಉಮೇಶ ಕತ್ತಿ, ಲಕ್ಷ್ಮಿ ಹೆಬ್ಬಾಳಕರ, ಅಭಯ ಪಾಟೀಲ, ಅನಿಲ ಬೆನಕೆ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಮುಖಂಡರಾದ ಪ್ರಕಾಶ ಹುಕ್ಕೇರಿ, ಸಂಜಯ ಪಾಟೀಲ, ಮನೋಹರ ಕಿಣೇಕರ, ಮೊದಲಾದವರು ಭಾಗವಹಿಸಲಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕಾರ್ಖಾನೆಯು ಮಾಜಿ ಸಚಿವ ದಿ. ರಾಮಭಾವು ಪೋತದಾರ ಅವರ ಕನಸಾಗಿತ್ತು. ಅದು ಈಗ ನನಸಾಗಿದೆ. ರೈತರಿಂದ ಷೇರು ಸಂಗ್ರಹಿಸಲಾಗಿದೆ. ಕಾರ್ಖಾನೆ ಸ್ಥಾಪನೆಗೆ ಸಂಬಂಧಿಸಿದಂತೆ ಎಚ್‌.ಡಿ. ದೇವೇಗೌಡರು ಬಹಳ ಸಹಕಾರ ನೀಡಿದ್ದರು. ಹೀಗಾಗಿ, ಅವರನ್ನೇ ಪೂಜೆಗೆ ಆಹ್ವಾನಿಸಿದ್ದೇವೆ’ ಎಂದರು.

ADVERTISEMENT

ವ್ಯವಸ್ಥಾಪಕ ನಿರ್ದೇಶಕ ಎಂ.ಡಿ. ಮುಳ್ಳೂರ, ‘ಮೊದಲ ಹಂಗಾಮಿನಲ್ಲಿ ಕಾರ್ಖಾನೆಯು 71ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸಿ, 1.28 ಲಕ್ಷ ಚೀಲ ಸಕ್ಕರೆ ತಯಾರಿಸಿದೆ. ರೈತರಿಗೆ ಟನ್ ಕಬ್ಬಿಗೆ ₹ 2,400 ಬಿಲ್ ಪಾವತಿಸಲಾಗಿದೆ. ಕಾರ್ಖಾನೆಯನ್ನು ₹ 84 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸದ್ಯಕ್ಕೆ ನಿತ್ಯ 8 ಮೆಗಾ ವಾಟ್‌ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಮುಂದಿನ ಹಂಗಾಮಿನಲ್ಲಿ ಉಪ ಉತ್ಪನ್ನಗಳು ಮತ್ತು ಎಥೆನಾಲ್‌ ಘಟಕ ಸ್ಥಾಪಿಸಲು ಪರವಾನಗಿ ಪಡೆಯಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.