ADVERTISEMENT

ಬೆಳಗಾವಿ | ಜನಸಂಖ್ಯೆ ಹೆಚ್ಚಳ: ಸೌಕರ್ಯದ್ದೇ ಕಳವಳ

ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಷ್ಟು ಇಲ್ಲ ಪಿಎಚ್‌ಸಿಗಳು, ಉಪಕೇಂದ್ರಗಳು, ಚಿಕಿತ್ಸೆ ಸಿಗದೆ ಜನರ ಪರದಾಟ

ಇಮಾಮ್‌ಹುಸೇನ್‌ ಗೂಡುನವರ
Published 7 ಏಪ್ರಿಲ್ 2025, 6:12 IST
Last Updated 7 ಏಪ್ರಿಲ್ 2025, 6:12 IST
ಖಾನಾಪುರ ತಾಲ್ಲೂಕಿನ ಹಲಸಿಯ ಪ್ರಾಥಮಿಕ ಆರೋಗ್ಯ ಕೇಂದ್ರ
ಖಾನಾಪುರ ತಾಲ್ಲೂಕಿನ ಹಲಸಿಯ ಪ್ರಾಥಮಿಕ ಆರೋಗ್ಯ ಕೇಂದ್ರ   

ಬೆಳಗಾವಿ: ಜಿಲ್ಲೆಯಲ್ಲಿ ಸರ್ಕಾರಿ ವಲಯದಲ್ಲಿ ಬೇಡಿಕೆಗೆ ತಕ್ಕಷ್ಟು ಆರೋಗ್ಯ ಸೌಕರ್ಯ ಲಭ್ಯವಿಲ್ಲ. ಇದರಿಂದ ಸಾರ್ವಜನಿಕರು ಅದರಲ್ಲೂ ಗ್ರಾಮೀಣ ಭಾಗದವರು ಪರದಾಡುತ್ತಿದ್ದು, ಸಕಾಲಕ್ಕೆ ಚಿಕಿತ್ಸೆ ಲಭ್ಯವಾಗದೆ ಸಾವು–ನೋವು ಸಂಭವಿಸುತ್ತಿವೆ.

ಕೆಲವು ಜಿಲ್ಲೆಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ, ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಸೌಕರ್ಯದಲ್ಲಿ ಹಿಂದೆಬಿದ್ದಿದೆ. 15 ತಾಲ್ಲೂಕು ಒಳಗೊಂಡ ಜಿಲ್ಲೆಗೆ ಮುಖ್ಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ), ಉಪಕೇಂದ್ರಗಳು ಬೇಕಿದೆ.

‘30 ಸಾವಿರ ಜನಸಂಖ್ಯೆ ಇದ್ದರೆ ಪಿಎಚ್‌ಸಿ, 5 ಸಾವಿರ ಜನಸಂಖ್ಯೆ ಹೊಂದಿದ್ದರೆ ಉಪಕೇಂದ್ರ ತೆರೆಯಬಹುದು ಎಂದು ಸರ್ಕಾರಿ ನಿಯಮವಿದೆ. ಅರಣ್ಯ ಮತ್ತು ಗುಡ್ಡಗಾಡು ಪ್ರದೇಶ ಇರುವ ಕಡೆ ಭೌಗೋಳಿಕ ವ್ಯಾಪ್ತಿ ದೊಡ್ಡದಿದ್ದರೂ, ಜನಸಂಖ್ಯೆ ಕಡಿಮೆ ಇರುವ ನೆಪವೊಡ್ಡಿ ಆಸ್ಪತ್ರೆಗಳ ಆರಂಭಕ್ಕೆ ಸರ್ಕಾರ ಮಂಜೂರಾತಿ ನೀಡುತ್ತಿಲ್ಲ. ಕೆಲವೆಡೆ ಜನಸಂಖ್ಯೆ ಹೆಚ್ಚಿದ್ದರೂ, ಮಂಜೂರಾತಿಗೆ ಮನಸ್ಸು ಮಾಡುತ್ತಿಲ್ಲ’ ಎಂದು ಮೂಲಗಳು ಹೇಳುತ್ತವೆ. ಜಿಲ್ಲೆಯಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.

ADVERTISEMENT

ದೂಳು ತಿನ್ನುತ್ತಿವೆ ಪ್ರಸ್ತಾವ: ಜಿಲ್ಲೆಯಲ್ಲಿ 139 ಪಿಎಚ್‌ಸಿ, 616 ಉಪಕೇಂದ್ರ, 12 ನಗರ ಪ್ರಾಥಮಿಕ ಕೇಂದ್ರ, 16 ಸಮುದಾಯ ಆರೋಗ್ಯ ಕೇಂದ್ರಗಳಿವೆ. ‘ಇವು ಸಾಲುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸಬೇಕು’ ಎಂಬ ಜನರ ಬೇಡಿಕೆ ಹಲವು ದಶಕಗಳಿಂದ ಇದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಲೇ ಇದೆ. ಆದರೆ, ಅದಕ್ಕೆ ಸ್ಪಂದನೆ ಸಿಗದೆ ಪ್ರಸ್ತಾವಗಳು ದೂಳು ತಿನ್ನುತ್ತಿವೆ ಎಂಬ ಆರೋಪ ಕೇಳಿಬರುತ್ತಿವೆ.

ಮಾನವ ಸಂಪನ್ಮೂಲದ ಅಭಾವ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಒಂದೆಡೆ ಸರ್ಕಾರಿ ಆಸ್ಪತ್ರೆಗಳಿಲ್ಲ. ಕೆಲವೆಡೆ ಇದ್ದರೂ ಸೇವೆಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಲಭ್ಯವಿಲ್ಲ.

ಜಿಲ್ಲೆಯ ಪಿಎಚ್‌ಸಿಗಳಿಗೆ 149 ವೈದ್ಯಾಧಿಕಾರಿ ಹುದ್ದೆ ಮಂಜೂರಾಗಿವೆ. ಈ ಪೈಕಿ 95 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 53 ಹುದ್ದೆ ಖಾಲಿ ಇವೆ. 

ಉಪಕೇಂದ್ರಗಳಿಗೆ 472 ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆ ಮಂಜೂರಾಗಿದ್ದು, 116 ಮಂದಿಯಷ್ಟೇ ಕೆಲಸ ಮಾಡುತ್ತಿದ್ದಾರೆ. 356 ಹುದ್ದೆ ಖಾಲಿ ಉಳಿದಿವೆ. ಇನ್ನೂ ಮಂಜೂರಾದ 641 ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳ ಪೈಕಿ ಕೆಲಸ ಮಾಡುತ್ತಿರುವುದು 317 ಮಂದಿ ಮಾತ್ರ. 324 ಹುದ್ದೆ ಭರ್ತಿಯಾಗಬೇಕಿದೆ. ಇದಲ್ಲದೆ, ವಿವಿಧ ಹಂತಗಳ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. 

ಮಾನವ ಸಂಪನ್ಮೂಲ ಕೊರತೆ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಮಕ್ಕಳು, ಗರ್ಭಿಣಿಯರಿಗೆ ಲಸಿಕಾಕರಣ, ವಿವಿಧ ಅಭಿಯಾನ ಮತ್ತು ವಿವಿಧ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ.

(ಪೂರಕ ಮಾಹಿತಿ: ಚನ್ನಪ್ಪ ಮಾದರ, ಆನಂದ ಮನ್ನಿಕೇರಿ, ಪ್ರಸನ್ನ ಕುಲಕರ್ಣಿ, ಪ್ರದೀಪ ಮೇಲಿನಮನಿ)

ರಾಯಬಾಗ ತಾಲ್ಲೂಕಿನ ಬ್ಯಾಕೂಡದ ಪ್ರಾಥಮಿಕ ಆರೋಗ್ಯ ಕೇಂದ್ರ
24x7 ಆರೋಗ್ಯ ಸೇವೆ ಮರೀಚಿಕೆ
ಖಾನಾಪುರ: ತಾಲ್ಲೂಕಿನ ಲೋಂಡಾ ಪಾರಿಶ್ವಾಡ ಇಟಗಿ ಹಲಸಿ ಅಶೋಕ ನಗರ ಗಣೇಬೈಲ್‌ ಕಣಕುಂಬಿ ಕಕ್ಕೇರಿ ಗ್ರಾಮಗಳಲ್ಲಿ ಪಿಎಚ್‌ಸಿಗಳು ಮತ್ತು ಅವುಗಳ ವ್ಯಾಪ್ತಿಯ ಉಪಕೇಂದ್ರಗಳಿವೆ. ಇವು ಗ್ರಾಮೀಣ ಭಾಗದ ಜನರಿಗೆ 24x7 ಆರೋಗ್ಯ ಸೇವೆ ಒದಗಿಸುವಲ್ಲಿ ವಿಫಲವಾಗಿವೆ. ಹಾಗಾಗಿ ಜನರು ಚಿಕಿತ್ಸೆಗಾಗಿ ಖಾನಾಪುರ ತಾಲ್ಲೂಕು ಆಸ್ಪತ್ರೆ ಅಥವಾ ಬೆಳಗಾವಿ ಜಿಲ್ಲಾಸ್ಪತ್ರೆಗೆ ಅಲೆಯುವಂತಾಗಿದೆ. ಆರೋಗ್ಯ ಸೌಕರ್ಯಕ್ಕೆ ಹಿನ್ನಡೆಯಾಗುವಲ್ಲಿ ರಾಜಕಾರಣಿಗಳ ನಿರಾಸಕ್ತಿ ಮತ್ತು ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೂ ಇದೆ. ‘ವೈದ್ಯರ ಕೊರತೆಯಿಂದಾಗಿ ಖಾನಾಪುರ ತಾಲ್ಲೂಕಿನ ಹಲವು ಪಿಎಚ್‌ಸಿಗಳಲ್ಲಿ ರೋಗಿಗಳಿಗೆ 24x7 ಮಾದರಿಯಲ್ಲಿ ಸೇವೆ ನೀಡಲಾಗುತ್ತಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಶ ಕಿವಡಸಣ್ಣವರ ಹೇಳಿದರು.
1 ಲಕ್ಷ ಜನಸಂಖ್ಯೆಗೆ ಒಂದೇ ಪಿಎಚ್‌ಸಿ
ಹಲವು ಹಳ್ಳಿಗಳ 1.07 ಲಕ್ಷ ಜನಸಂಖ್ಯೆಗೆ ರಾಯಬಾಗ ತಾಲ್ಲೂಕಿನ ಬ್ಯಾಕುಡದಲ್ಲಿ ಒಂದೇ ಪಿಎಚ್‌ಸಿ ಇದೆ. ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಈ ಪಿಎಚ್‌ಸಿ 24x7 ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿ ಪ್ರತಿದಿನ 150ರಿಂದ 180 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಆದರೆ ಸಿಬ್ಬಂದಿ ಕೊರತೆ ಕಾರಣಕ್ಕೆ ಹಾಲಿ ಇರುವ ಸಿಬ್ಬಂದಿಗೂ ಕಾರ್ಯದೊತ್ತಡ ಹೆಚ್ಚಿದೆ. ತಾಲ್ಲೂಕಿನ ವಿವಿಧ ಪಿಎಚ್‌ಸಿಗಳಲ್ಲಿ ಬೆಳಿಗ್ಗೆ ಮಾತ್ರ ವೈದ್ಯರು ಸೇವೆಗೆ ಲಭಿಸುತ್ತಾರೆ. ರಾತ್ರಿ ವೈದ್ಯರು ಸಿಗದ ಕಾರಣ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುವಂತಾಗಿದೆ. ‘ಗ್ರಾಮೀಣ ಭಾಗದಲ್ಲಿ ನಮ್ಮ ವಸತಿಗೆ ಸೂಕ್ತ ವ್ಯವಸ್ಥೆ ಇಲ್ಲ. ಹಾಗಾಗಿ ಗ್ರಾಮಗಳಲ್ಲಿ ನಾವು ರಾತ್ರಿ ಉಳಿಯುತ್ತಿಲ್ಲ’ ಎಂಬುದು ವೈದ್ಯರ ಸಮಜಾಯಿಷಿ.

ಯಾರು ಏನಂತಾರೆ?

ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ ಸರ್ಕಾರಿ ಆಸ್ಪತ್ರೆ ಆರಂಭಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆ ತುಂಬಲಾಗುತ್ತಿದೆ

-ಡಾ.ಐ.ಪಿ.ಗಡಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ರಾಮದುರ್ಗ ತಾಲ್ಲೂಕಿನಲ್ಲಿ 6 ಪಿಎಚ್‌ಸಿ ಇದ್ದು ನಾಲ್ಕೈದು ಕಡೆ ಇನ್ನೂ ಬೇಡಿಕೆ ಇದೆ. ಈ ಪೈಕಿ ಎರಡು ಕಡೆ ಆರಂಭಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಬನ್ನೂರ ತಾಂಡೆಯಲ್ಲಿ ಸರ್ಕಾರಿ ಜಾಗ ಸಿಕ್ಕಿದ್ದು ಚುಂಚನೂರಿನಲ್ಲಿ ಸಿಗಬೇಕಿದೆ

- ಡಾ.ನವೀನ ನಿಜಗುಲಿ ತಾಲ್ಲೂಕು ಆರೋಗ್ಯಾಧಿಕಾರಿ ರಾಮದುರ್ಗ

ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ ಪಿಎಚ್‌ಸಿಗಳ ಆರಂಭಕ್ಕೆ ಎಲ್ಲಿಯೂ ಬೇಡಿಕೆ ಬಂದಿಲ್ಲ. ಹುಣಸಿಕಟ್ಟಿ ಹೊರತುಪಡಿಸಿ ಉಳಿದೆಡೆ ಎಂಬಿಬಿಎಸ್‌ ಓದಿದ ವೈದ್ಯರ ಸೇವೆ ಲಭ್ಯವಿದೆ. ಹುಣಸಿಕಟ್ಟಿಯಲ್ಲಿ ಆಯುಷ್ ವೈದ್ಯರಿದ್ದು ಅಲ್ಲಿಯೂ ಶೀಘ್ರ ಎಂಬಿಬಿಎಸ್‌ ಓದಿದ ವೈದ್ಯರ ನೇಮಕ ಆಗಲಿದೆ

ಡಾ.ಎಸ್.ಎಸ್.ಸಿದ್ದಣ್ಣವರ ತಾಲ್ಲೂಕು ಆರೋಗ್ಯಾಧಿಕಾರಿ ಬೈಲಹೊಂಗಲ

ನಾವು ಚಿಕಿತ್ಸೆಗಾಗಿ ದೂರದ ಹೊಸಕೋಟಿಗೆ ಹೋಗಬೇಕಿದೆ. ಏಳು ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿರುವ ನಮ್ಮೂರಿಗೆ ತುರ್ತಾಗಿ ಪಿಎಚ್‌ಸಿ ಅಗತ್ಯವಿದೆ‌

ಜಗದೀಶ ದೇವರಡ್ಡಿ ಮುಖಂಡ ಸಾಲಾಪುರ

ಆರೋಗ್ಯ ಸಮಸ್ಯೆಯಾದರೆ ಹಳೇತೊರಗಲ್ ಗ್ರಾಮಸ್ಥರು ಚಿಕಿತ್ಸೆಗೆ ರಾಮದುರ್ಗಕ್ಕೆ ಹೋಗಬೇಕಿದೆ. ಆದರೆ ಅಲ್ಲಿಗೆ ಸರಿಯಾಗಿ ಬಸ್ ಸೌಕರ್ಯ ಇಲ್ಲದ್ದರಿಂದ ಪರದಾಡುವಂತಾಗಿದೆ

ಜಹೂರ್ ಹಾಜಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೊಡಚಿ ಕ್ಷೇತ್ರ

ಖಾನಾಪುರ ತಾಲ್ಲೂಕಿನ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ದೊರೆಯುತ್ತಿಲ್ಲ. ಹಾಗಾಗಿ ಖಾಸಗಿ ವೈದ್ಯರ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ

ಮಲ್ಲಪ್ಪ ಮಾರಿಹಾಳ ಸಾಮಾಜಿಕ ಕಾರ್ಯಕರ್ತ ಚಾಪಗಾಂವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.