ADVERTISEMENT

ಚಹಾ– ಕಾಫಿ ಪೂರೈಸಲು ಮಣ್ಣಿನ ಕುಡಿಕೆ ಬಳಸಲು ಕುಂಬಾರರ ಕೋರಿಕೆ

ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಮನವಿ ಸಲ್ಲಿಕೆ;

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 15:11 IST
Last Updated 3 ಸೆಪ್ಟೆಂಬರ್ 2019, 15:11 IST
ಚಹಾ– ಕಾಫಿ ಸೇವಿಸಲು ಬಳಸುವ ಕೆಲವು ಮಣ್ಣಿನ ಕುಡಿಕೆಗಳ ಮಾದರಿಗಳನ್ನು ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದ ಸಂಗಪ್ಪ ಬಸಪ್ಪ ಕುಂಬಾರ ಅವರು ಬೆಳಗಾವಿಯಲ್ಲಿ ಮಂಗಳವಾರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ನೀಡಿದರು.
ಚಹಾ– ಕಾಫಿ ಸೇವಿಸಲು ಬಳಸುವ ಕೆಲವು ಮಣ್ಣಿನ ಕುಡಿಕೆಗಳ ಮಾದರಿಗಳನ್ನು ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದ ಸಂಗಪ್ಪ ಬಸಪ್ಪ ಕುಂಬಾರ ಅವರು ಬೆಳಗಾವಿಯಲ್ಲಿ ಮಂಗಳವಾರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ನೀಡಿದರು.   

ಬೆಳಗಾವಿ: ‘ಚಹಾ– ಕಾಫಿ ಸೇವಿಸಲು ಬಳಸುವ ಮಣ್ಣಿನ ಕುಡಿಕೆಗಳನ್ನು ಸ್ಥಳೀಯ ಕುಂಬಾರರಿಂದಲೇ ಖರೀದಿಸಬೇಕು. ಇದರಿಂದ ಕುಂಬಾರಿಕೆ ಕಲೆ ಹಾಗೂ ಕುಂಬಾರರ ಕುಟುಂಬಗಳು ಬದುಕುಳಿಯುತ್ತವೆ. ನಶಿಸಿ ಹೋಗುತ್ತಿರುವ ಕುಂಬಾರಿಕೆಗೆ ಪುನರುಜ್ಜೀವನ ದೊರೆತಂತಾಗುತ್ತದೆ’ ಎಂದು ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದ ಸಂಗಪ್ಪ ಬಸಪ್ಪ ಕುಂಬಾರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ಸಚಿವರನ್ನು ಮಂಗಳವಾರ ಭೇಟಿ ನೀಡಿದ ಸಂಗಪ್ಪ ಅವರು, ‘ಪ್ಲಾಸ್ಟಿಕ್‌ ಬಳಕೆಯ ಮೇಲೆ ನಿರ್ಬಂಧ ಹೇರಲು ರೈಲ್ವೆ ಇಲಾಖೆ ಚಿಂತನೆ ನಡೆಸಿದ್ದನ್ನು ಕೇಳಿದ್ದೇನೆ. ಇದೇ ರೀತಿ, ಚಹಾ– ಕಾಫಿ ಸೇವಿಸಲು ಬಳಸುವ ಪ್ಲಾಸ್ಟಿಕ್‌ ಕಪ್‌ಗಳನ್ನೂ ನಿಷೇಧಿಸಬೇಕು. ಇದರ ಬದಲಾಗಿ ಪ್ರಯಾಣಿಕರಿಗೆ ಮಣ್ಣಿನ ಕುಡಿಕೆಗಳನ್ನು ಪೂರೈಸಲು ಕ್ರಮಕೈಗೊಳ್ಳಬೇಕು’ ಎಂದು ಕೋರಿದರು.

‘ಮಣ್ಣಿನ ಕುಡಿಕೆಗಳು ಆರೋಗ್ಯಕ್ಕೆ ಪೂರಕವಾಗಿವೆ. ಪರಿಸರ ಸ್ನೇಹಿಯೂ ಆಗಿವೆ. ಪ್ಲಾಸ್ಟಿಕ್‌ ಕಪ್‌ಗಳಿಗೆ ಹೋಲಿಸಿದರೆ ಕೊಂಚ ದುಬಾರಿಯಾಗಬಹುದು, ಆದರೆ, ಇತರ ಪ್ರಯೋಜನಗಳನ್ನೂ ಪರಿಗಣಿಸಿ ಅವಕಾಶ ಕಲ್ಪಿಸಬೇಕು’ ಎಂದು ಹೇಳಿದರು.

ADVERTISEMENT

‘ಸುರೇಶ ಅಂಗಡಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ಯದಲ್ಲಿಯೇ ತೀರ್ಮಾನ ತಿಳಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಮಣ್ಣಿನ ಕುಡಿಕೆಯ ಕೆಲವು ಮಾದರಿಗಳನ್ನು ಸಚಿವರಿಗೆ ಹಾಗೂ ನೈರುತ್ಯ ರೈಲ್ವೆಯ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್‌ ಅವರಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.