ಕೌಜಲಗಿ: ‘ಕೇಂದ್ರ ಸರ್ಕಾರದ ‘ಸ್ವಾಮಿತ್ವ’ ಯೋಜನೆಗೆ ಗೋಕಾಕ ಹಾಗೂ ಮೂಡಲಗಿ ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ಶೀಘ್ರದಲ್ಲಿಯೇ ಚಾಲನೆ ದೊರೆಯಲಿದೆ’ ಎಂದು ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆ ಸೂಪರ್ವೈಸರ್ ಬಿ.ವೈ. ಉಪ್ಪಾರ ತಿಳಿಸಿದರು.
ಸೋಮವಾರ ಸಮೀಪದ ಢವಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಿಮಟ್ಟಿ, ಢವಳೇಶ್ವರ ಹಾಗೂ ಮನ್ನಾಪೂರ ಗ್ರಾಮದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
‘ಗ್ರಾಮೀಣ ಜನರು ಆಸ್ತಿ ದಾಖಲೆಗಳನ್ನು ಪಡೆಯಲು ಯೋಜನೆಯು ಸಹಕಾರಿಯಾಗಿದೆ. ಆಸ್ತಿಯ ವಿಸ್ತೀರ್ಣ, ಸೀಮೆಯನ್ನು ಗುರುತಿಸಿಕೊಳ್ಳಬಹುದಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ, ಡ್ರೋಣ್ ಆಧಾರಿತ ಸಮೀಕ್ಷೆ ಕೈಗೊಳ್ಳಲಾಗುವುದು. ಗ್ರಾಮಗಳ ಆಸ್ತಿಯನ್ನು ಬಿಳಿ ಬಣ್ಣದಿಂದ ಗುರುತಿಸಲಾಗುವುದು’ ಎಂದು ಮಾಹಿತಿ ನೀಡಿದರು.
‘ಮೂಡಲಗಿ ತಾಲ್ಲೂಕಿನ ಅರಳಿಮಟ್ಟಿ, ಢವಳೇಶ್ವರ ಹಾಗೂ ಮನ್ನಾಪೂರ ಗ್ರಾಮಗಳು ಹಾಗೂ ಗೋಕಾಕ ತಾಲ್ಲೂಕಿನ ಶಿಲ್ತಿಭಾಂವಿ, ಪುಡಕಲಕಟ್ಟಿ, ಜಮನಾಳ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.
ಸರ್ವೆ ಸೂಪರ್ವೈಸರ್ ಎಂ.ಆರ್. ಭೋವಿ, ಸರ್ವೆ ಅಧಿಕಾರಿಗಳಾದ ವೀರೇಶ ಮೇಟಿ, ಎಂ.ಎಚ್. ಸಿಂದಗಿ, ಗಣೇಶ ದೇವಾಡಿಗ, ಪ್ರಕಾಶ ಕಾಳಗಿ, ಶಂಕರ ಪಿಡಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.