ರಾಮದುರ್ಗ: ಮಹಿಳೆಯರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಬೇಕಾದರೆ ಅವಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಹೆಣ್ಣು ಎನ್ನುವ ಕಾರಣಕ್ಕೆ ಶಿಕ್ಷಣದಿಂದ ವಂಚಿತಗೊಳಿಸಬಾರದು ಎಂದು ಮಹಿಳಾ ನಾಯಕಿ ಜಮುನಾ ಪಟ್ಟಣ ಹೇಳಿದರು.
ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಹೆಣ್ಣು ಕಲಿತರೆ ಕುಟುಂಬವೇ ಸುಶಿಕ್ಷಿತಗೊಳ್ಳಲಿದೆ ಎಂದು ತಿಳಿಸಿದರು.
ಕಾರ್ಮಿಕ ಮುಖಂಡ ಜಿ.ಎಂ. ಜೈನೆಖಾನ್ ಅಧ್ಯಕ್ಷತೆ ವಹಿಸಿದ್ದರು. ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ಮಹಿಳೆಯರು ಧೈರ್ಯ, ಸಾಹಸ ಜನ ಮೆಚ್ಚುವಂತ ಕಾರ್ಯ. ಸರ್ಕಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಒಂದು ದಿನ ರಜೆ ಘೋಷಿಸಲು ಹೋರಾಟ ಮಾಡಬೇಕು ಎಂದು ಹೇಳಿದರು.
ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಾಗಪ್ಪ ಸಂಗೊಳ್ಳಿ ಮಾತನಾಡಿ, ‘ಪ್ರತಿಯೊಂದು ರಂಗದಲ್ಲಿ ಅದರಲ್ಲೂ ರಾಜಕೀಯ ರಂಗದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸಬೇಕು. ಮಹಿಳಾ ಮೀಸಲಾತಿಗೆ ನಿರಂತರ ಶ್ರಮ ವಹಿಸಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾದೇವಿ ಸೊಪ್ಪಡ್ಲ, ಶಕುಂತಲಾ ನಾರಾಯಣಕರ, ಮಾಲಾ ಇಳಿಗೇರ, ರುಕ್ಮವ್ವ ಬಿಜ್ಜಣ್ಣವರ, ಮಾಲಾಶ್ರೀ ಕಳ್ಳಿಮಠ, ರೇಖಾ ಪುಜಾರಿ, ಶೈಲಾ ಕುಂಬಾರ, ಶಕೀಲಾ ಮುಜಾವರ, ವಿಜಯಲಕ್ಷ್ಮೀ ಸಿದ್ದಿಭಾಂವಿ ಇದ್ದರು. ಸರಸ್ವತಿ ಮಾಳಶೆಟ್ಟಿ ಸ್ವಾಗತಿಸಿದರು, ತುಳಸಮ್ಮ ಮಾಳದಕರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.