ಬೆಳಗಾವಿ: ‘ಜಾಗೃತ ಮಹಿಳಾ ಒಕ್ಕೂಟದಿಂದ ಅ. 15ರಂದು ಖಾನಾಪುರ ತಾಲ್ಲೂಕಿನ ಬೀಡಿಯಲ್ಲಿ ಜಾಥಾ ಹಾಗೂ ಕಂದಾಯ ಉಪನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
‘ಅ. 15ನ್ನು ‘ಗ್ರಾಮೀಣ ಮಹಿಳಾ ದಿನ’ವೆಂದು ವಿಶ್ವ ಸಂಸ್ಥೆ ಹಾಗೂ ‘ಮಹಿಳಾ ರೈತರ ದಿನ’ವೆಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ‘ಮಹಿಳೆಯರನ್ನು ರೈತರೆಂದು ಗುರುತಿಸಬೇಕು’ ಎಂದು ಮನವಿ ಸಲ್ಲಿಸಲಾಗುವುದು. ಜಾಗೃತ ಮಹಿಳಾ ಒಕ್ಕೂಟ, ಭೂಮಿಗಾಗಿ ಭೂಹೀನರ ಹೋರಾಟ ಸಮಿತಿ ಮತ್ತು ನಮ್ಮೂರ ಭೂಮಿ ನಮಗಿರಲಿ ಆಂದೋಲನದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಭಾಗವಹಿಸಲಿದ್ದಾರೆ’ ಎಂದು ಆಯೋಜಕರಾದ ಸುವರ್ಣಾ ಕುಠಾಳೆ, ಮಹಾನಂದಾ ತಳವಾರ, ಶಾರದಾ ಗೋಪಾಲ ತಿಳಿಸಿದ್ದಾರೆ.
‘ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಹಿಂಪಡೆಯಬೇಕು. ಹಳ್ಳಿಗಳಲ್ಲಿ ಭೂಮಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಯಲ್ಲಿ ತೊಡಗಿರುವ ಮಹಿಳೆಯರನ್ನು ರೈತರೆಂದು ಘೋಷಿಸಿ ‘ಕಿಸಾನ್ ಕಾರ್ಡ್’ ಕೊಡಬೇಕು. ಕುಟುಂಬದ ಭೂ ದಾಖಲೆಗಳಲ್ಲಿ ಕಡ್ಡಾಯವಾಗಿ ಪತಿ-ಪತ್ನಿ ಇಬ್ಬರ ಹೆಸರೂ ದಾಖಲಾಗಬೇಕು. ಬಗರ್ಹುಕುಂ ಅಥವಾ ಬೇರಾವುದೇ ಯೋಜನೆಯಲ್ಲಿ ಭೂಮಿಯನ್ನು ಭೂರಹಿತ ಕುಟುಂಬಗಳಿಗೆ ಹಂಚುವಾಗ ಪತಿ-ಪತ್ನಿ ಇಬ್ಬರ ಹೆಸರಿನಲ್ಲೂ ಕಡ್ಡಾಯವಾಗಿ ದಾಖಲಿಸಬೇಕು. ಹೊಸದಾಗಿ ಭೂಮಿ ಮಂಜೂರು ಮಾಡುವಾಗ ಬೇರೆ ಬೇರೆ ಕಾರಣಗಳಿಗಾಗಿ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಹೆಸರಲ್ಲೇ ದಾಖಲೆ ಒದಗಿಸಬೇಕು. ದೊಡ್ಡ ಪ್ರಮಾಣದ ಕೃಷಿ ಭೂಮಿ ಪಾಳು ಬಿದ್ದಿದ್ದು, ಅದನ್ನು ಮಹಿಳೆಯರಿಗೆ ಸ್ವಂತ ಅಥವಾ ಸಾಮೂಹಿಕವಾಗಿ ಕೃಷಿ ಮಾಡಲು ದೀರ್ಘಾವಧಿವರೆಗೆ ಗುತ್ತಿಗೆ ಕೊಡಬೇಕು ಎಂದು ಒತ್ತಾಯಿಸಿ ಸರ್ಕಾರದ ಗಮನಸೆಳೆಯಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.