ಕಾಗವಾಡದಲ್ಲಿ ಧರ್ಮಸ್ಥಳ ಅಭಿಮಾನಿಗಳು ನಡೆಸಿದ ಪ್ರತಿಭಟನೆಯಲ್ಲಿ ಮುಖಂಡರು, ಸ್ವಾಮೀಜಿ ತಹಶಿಲ್ದಾರ್ಗೆ ಮನವಿ ಸಲ್ಲಿಸಿದರು
ಕಾಗವಾಡ: ರಾಜ್ಯದ ಮಹಿಳೆಯರು ಆರ್ಥಿಕವಾಗಿ ಸಧೃಡರಾಗಿ ಸ್ವಾವಲಂಬಿ ಜೀವನ ನಡೆಸಲು ಕಾರಣವಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ತೇಜೋವಧೆಗೆ ಸಾಕಷ್ಟು ಪ್ರಯತ್ನ ನಡೆಯುತ್ತಿದ್ದರೂ ಕಳಂಕ ರಹಿತರಾಗಿ ಹೊರಹೊಮ್ಮಲಿದ್ದಾರೆ ಎಂದು ಕವಲಗುಡ್ಡ ಆಶ್ರಮದ ಅಮರೇಶ್ವರ ಮಹಾರಾಜರು ಹೇಳಿದರು.
ಕಾಗವಾಡದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಧರ್ಮಸ್ಥಳಕ್ಕೆ ಬಂದ ದೇಣಿಗೆ ಹಣದಲ್ಲಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಹೆಗ್ಗಡೆ ಅವರ ಹೆಸರಿಗೆ ಕಿಡಿಗೇಡಿಗಳು ಅವರ ಹೆಸರನ್ನು ಕೆಡಿಸುವ ಹುನ್ನಾರ ಮಾಡುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳ ಷ್ಯಡ್ಯಂತ್ರ ರಚಿಸಿದ್ದು ವೀರೇಂದ್ರ ಹೆಗ್ಗಡೆ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಅವರ ಬೆನ್ನಿಗೆ ನಾವೆಲ್ಲ ಮಠಾಧೀಶರು ನಿಲ್ಲುತ್ತೇವೆ ಎಂದರು.
ಕರ್ನಾಟಕ ರಾಜ್ಯ ಜೈನ ಅಸೊಸಿಯೇಶನ್ನ ಉಪಾಧ್ಯಕ್ಷ ಶೀತಲ ಪಾಟೀಲ ಮಾತನಾಡಿ, ವೀರೇಂದ್ರ ಹೆಗ್ಗಡೆ ಬಗ್ಗೆ ಕಳೆದ ಕೆಲ ದಿನಗಳಿಂದ ಯೂಟ್ಯೂಬರ್ಗಳು ಮತ್ತು ತಮ್ಮನ್ನು ತಾವು ಸಮಾಜವಾದಿಗಳೆಂದು ಬಿಂಬಿಸಿಕೊಂಡಿರುವ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಹೆಗ್ಗಡೆ ಅವರ ಹೆಸರು ಕೆಡಿಸುತ್ತಿರುವವರ ಹಿನ್ನೆಲೆಯನ್ನು ಬಯಲಿಗೆಳೆದು ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಬಳಿಕ ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು.
ಶೀತಲ ಪಾಟೀಲ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಂಜಯ ತಳವಲಕರ, ಅರುಣ ಗಾಣಿಗೇರ, ಅಮೀನ ಶೇಖ, ಬಾನು ನದಾಫ, ಅಣ್ಣಾಸಾಬ ಪಾಟೀಲ, ಅರುಣ ಗಣೇಶವಾಡಿ, ವಜ್ರಕುಮಾರ ಮಗದುಮ್ಮ, ದೀಪಕ ಪಾಟೀಲ,ಸಂಜಯ ಕುಚನೂರೆ, ಅರುಣ ಫರಾಂಡೆ, ವಿನಾಯಕ ಬಾಗಡಿ,ಅಭಯ ಅಕಿವಾಟೆ, ಶಾಂತಿನಾಥ ಕರವ, ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.