ಬೆಳಗಾವಿ: ‘ಕೋವಿಡ್ 3ನೇ ಅಲೆಯಲ್ಲಿ ಜನರ ಜೀವ ಉಳಿಸಲು ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಸಿಪಿಐ (ಎಂ), ಎಸ್ಯುಸಿಐ ವತಿಯಿಂದ ಮನೆ ಮನೆಗಳಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
‘ಸಾರ್ವತ್ರಿಕವಾಗಿ ಉಚಿತ ಕೋವಿಡ್ ಲಸಿಕೆ, ಔಷಧಿ ಮತ್ತು ಚಿಕಿತ್ಸೆ ಒದಗಿಸಬೇಕು. ಬಡವರಿಗೆ ನೇರ ನಗದು ವರ್ಗಾವಣೆ ಮಾಡಬೇಕು. ಉಚಿತವಾಗಿ ಅಕ್ಕಿ, ಬೇಳೆ, ಗೋಧಿ, ಜೋಳ, ಅಡುಗೆ ಎಣ್ಣೆ ಒಳಗೊಂಡ ಪಡಿತರ ವಿತರಿಸಬೇಕು. ರೈತ-ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿಯನ್ನು 200 ದಿನಗಳಿಗೆ ಹೆಚ್ಚಿಸಬೇಕು ಹಾಗೂ ನಗರ ಪ್ರದೇಶಗಳಿಗೂ ಈ ಯೋಜನೆ ವಿಸ್ತರಿಸಬೇಕು. ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು’ ಎನ್ನುವುದು ಸೇರಿದಂತೆ 16 ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.
ರಾಜ್ಯವ್ಯಾಪಿ ಹಮ್ಮಿಕೊಂಡಿದ್ದ ಈ ಹೋರಾಟಕ್ಕೆ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಎಸ್ಯುಸಿಐ(ಸಿ) ಜಿಲ್ಲಾ ಸಮಿತಿ ಸದಸ್ಯರಾದ ರಾಜು ಗಾಣಗಿ, ಲಕ್ಕಪ್ಪ ಬಿಜ್ಜನ್ನವರ, ಹಾಗೂ ನರೇಗಾ ಕಾರ್ಮಿಕರಾದ ಭೀಮಶೆಪ್ಪ ದಳವಾಯಿ, ಯಲ್ಲಪ್ಪ ಕಾಂಬಳೆ, ಎಲ್ಲ ಎಡ ಹಾಗೂ ಪ್ರಜಾತಾಂತ್ರಿಕ ಪಕ್ಷಗಳ ಕಾರ್ಯಕರ್ತರು ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.