ರಾಮದುರ್ಗ: ಬಡವರಿಗೆ ತ್ವರಿತವಾಗಿ ಆಶ್ರಯ ಮನೆಗಳ ಹಂಚಿಕೆ ಮಾಡಲು ರಾಮದುರ್ಗ ಪುರಸಭೆ ಮುಂದಾಗಬೇಕು ಎಂದು ಆಗ್ರಹಿಸಿ ಜನಪರ ಟ್ರಸ್ಟ್ ಮತ್ತು ಜೈ ಭೀಮ ಯುವ ಜಾಗೃತ ಸೇನೆಯ ಪದಾಧಿಕಾರಿಗಳು ಪುರಸಭೆ ಮುಂಭಾಗದಲ್ಲಿ ಧರಣಿ ನಡೆಸಿ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಅವರಿಗೆ ಮನವಿ ಸಲ್ಲಿಸಿದರು.
ರಾಮದುರ್ಗದ ಪುರಸಭೆಯಿಂದ ಕಳೆದ 14 ವರ್ಷಗಳಿಂದಲೂ ಬಡವರಿಗೆ ಆಶ್ರಯ ಮನೆಗಳ ವಿತರಿಸಿಲ್ಲ. ಈ ಹಿಂದೆಯೇ ರಂಕಲಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 6 ಎಕರೆ ಜಮೀನು ಖರೀದಿಸಿದ್ದರೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ. ಇದರಿಂದ ಬಡವರಿಗೆ ತೊಂದರೆಯಾಗಿದೆ. ಶೀಘ್ರ ನಿವೇಶನ ಹಂಚಿಕೆಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದಲ್ಲಿರುವ ದಲಿತ ಕುಟುಂಬಗಳಿಗೆ, ಕಾರ್ಮಿಕರಿಗೆ, ಬಡ ನೇಕಾರರಿಗೆ, ಅಂಗವಿಕಲರಿಗೆ ಮತ್ತು ಬಡತನ ರೇಖೆಗಿನ ಜನರಿಗೆ ಹಂಚಿಕೆ ಮಾಡಬೇಕು. ಪಕ್ಷಾತೀತವಾಗಿ ಮನೆಗಳ ಹಂಚಿಕೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಮನೆಗಳನ್ನು ತ್ವರಿತವಾಗಿ ಹಂಚಿಕೆಗೆ ಪುರಸಭೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಉಗ್ರ ಹೋರಾಟದ ಹಾದಿ ಹಿಡಿಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುಭಾಸ ಘೋಡಕೆ, ಧಾರಾಸಿಂಗ ಪವಾರ, ವೀರೇಶ ಕಲ್ಯಾಣಿ, ಗೂಡುಸಾಬ ನಿಂಗಾಪೂರ, ವಿನಯ ಚಂದರಗಿ, ಬಾಲು ನಿರಂಜನ, ಅಭಿ ಮುನವಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.