ಬೆಳಗಾವಿ: ‘ಜುಲೈ 12ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಜಿಲ್ಲೆಯ 85 ನ್ಯಾಯಾಲಯಗಳಲ್ಲಿ ಒಟ್ಟು 1.47 ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ನೋಂದಣಿಯಾಗಿವೆ. ಅದರಲ್ಲಿ ಗುರುತಿಸಿರುವ ಸುಮಾರು 20 ಸಾವಿರ ಪ್ರಕರಣಗಳನ್ನು ಇತ್ಯರ್ಥ ಪಡಿಸಬಹುದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಂದೀಪ ಪಾಟೀಲ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಈಗಾಗಲೇ ಎಲ್ಲ ನ್ಯಾಯಾಲಯಗಳಲ್ಲಿ ನಿರ್ದೇಶನ ನೀಡಲಾಗಿದೆ. ಕಾಯಂ ಲೋಕ್ ಅದಾಲತ್ ರಾಜ್ಯದಲ್ಲಿ ಬೆಳಗಾವಿ ಸೇರಿದಂತೆ 6 ಭಾಗದಲ್ಲಿ ನಡೆಯುತ್ತಿದ್ದು, ನ್ಯಾಯಾಲಯಗಳಲ್ಲಿ ವಿವಿಧ ರಾಜಿಯಾಗುವಂತಹ ಪ್ರಕರಣಗಳನ್ನು ನೋಂದಾಯಿಸಿಕೊಂಡು, ಕಾನೂನು ಸೇವೆಗೆ ಯಾವುದೇ ಹಣ ಪಾವತಿಸದೇ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ’ ಎಂದರು.
‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸಾಥಿ ಸಮಿತಿ, ಜಾಗೃತಿ ಸಮಿತಿ, ಆಶಾ ಸಮಿತಿ, ಸಂವಾದ ಮತ್ತು ಡೌನ್ ಎಂದು 5 ಸಮಿತಿಗಳನ್ನು ರಚಿಸಲಾಗಿದೆ. ಸಾರ್ವಜನಿಕರಿಗೆ ಮಾಹಿತಿ, ಕಾನೂನು ಸಲಹೆ, ಸರ್ಕಾರಿ ಯೋಜನೆಗಳ ಅರಿವು ಸೇರಿದಂತೆ ಇನ್ನಿತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
‘ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಹರಿಗೆ ಯೋಜನೆಗಳು ತಲುಪುವ ಅವಶ್ಯಕತೆ ಬಹಳಷ್ಟಿದೆ. ಈ ಯೋಜನೆಗಳನ್ನು ಜನರಿಗೆ ಅತಿ ಸುಲಭವಾಗಿ ತಲುಪಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆಯೋಜಿಸಲಾದ ಸಭೆ, ಸಮಾರಂಭಗಳಲ್ಲಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸತತವಾಗಿ ಮಾಹಿತಿ ತಲುಪಿಸಲಾಗುವುದು. ಅದೇ ರೀತಿಯಲ್ಲಿ ರಾಜಿ ಆಗಬಹುದಾದ ಪ್ರಕರಣಗಳನ್ನು ಗುರುತಿಸಿ, ಎರಡು ಕಡೆಯ ಕಕ್ಷಿದಾರರನ್ನು ಕರೆಸಿ ಹಿರಿಯ ವಕೀಲರ ಸಮ್ಮುಖದಲ್ಲಿ ಮಧ್ಯಸ್ಥಿಕೆ ವಹಿಸಿ ರಾಜೀ-ಸಂದಾನಕ್ಕೆ ಯಾವುದೇ ರೀತಿಯ ಒತ್ತಾಯ ಮಾಡದೇ ಮಾತುಕತೆ ನಡೆಸಲಾಗುವುದು. ಈ ಕುರಿತು ಈಗಾಗಲೇ 90 ದಿನಗಳ ಕಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದರು.
‘ಒಂದು ವೇಳೆ ಇಬ್ಬರು ಕಕ್ಷಿದಾರರ ಮಧ್ಯೆ ಪ್ರಕರಣ ಇತ್ಯರ್ಥವಾದಲ್ಲಿ, ನ್ಯಾಯಾಲಯ ಇಬ್ಬರು ಕಕ್ಷಿದಾರ ಮುಚ್ಚಳಿಕೆ ಪಡೆದು ಪ್ರಕರಣ ಖುಲಾಸೆ ಮಾಡಲಾಗುವುದು’ ಎಂದೂ ಅವರು ವಿವರಿಸಿದರು.
ಸಮಿತಿಗಳ ಕಾರ್ಯ ಏನು?
ಸಾಥಿ ಸಮಿತಿ: ಸಾಥಿ ಸಮಿತಿ ಮೂಲಕ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ಜಿಲ್ಲೆಯಲ್ಲಿ ಆಧಾರ ಕಾರ್ಡ್ ಹೊಂದಿರದ ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಂತವರಿಗೆ ಆಧಾರ ಕಾರ್ಡ್ ಗುರುತಿನ ಚೀಟಿ ಮಾಡಲಿದೆ. ಈ ಕುರಿತು ಜುಲೈ 30ರ ವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಂದೀಪ ಪಾಟೀಲ ಹೇಳಿದರು.
ಜಾಗೃತಿ ಸಮಿತಿ: ಸರ್ಕಾರದ ವಿವಿಧ ಇಲಾಖೆಯ ಎಲ್ಲ ಯೋಜನೆಗಳ ಮಾಹಿತಿಯನ್ನು ಒದಗಿಸಲು ಸಾರ್ವಜನಿಕ ವಲಯಗಳಿಗೆ ತೆರಳಿ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಜಾಗೃತಿ ಸಮಿತಿ ರಚಿಸಲಾಗಿದೆ.
ಆಶಾ ಸಮಿತಿ: ಬಾಲ್ಯ ವಿವಾಹ ದೌರ್ಜನ್ಯ ನಿಯಂತ್ರಣ ಬಾಲ ಕಾರ್ಮಿಕರ ತಂದೆ ತಾಯಿಗಳಲ್ಲಿ ಜಾಗೃತಿ ಸೇರಿದಂತೆ ಇನ್ನಿತರ ದೌರ್ಜನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿ ಮೂಡಿಸಲು ಆಶಾ ಸಮಿತಿ ಕಾರ್ಯ ನಿರ್ವಹಿಸುತ್ತದೆ.
ಸಂವಾದ: ಕಾಡಂಚಿನ ಗ್ರಾಮಗಳು ಮತ್ತು ಬುಡಕಟ್ಟು ಜನರಿಗೆ ಕಾನೂನು ಕಾಯ್ದೆ ಕಡ್ಡಾಯ ಶಿಕ್ಷಣ ಸೇರಿದಂತೆ ಅಂಥವರನ್ನು ಮುಖ್ಯ ವಾಹಿನಿಗೆ ತರಲು ಇರುವ ವಿಷಯ ಕಾಯ್ದೆಗಳನ್ನು ತಿಳಿಸುವುದು ಸಂವಾದ ಸಮಿತಿ ಮಾಡಲಿದೆ.
ಡೌನ್ ಸಮಿತಿ: ಜೀವನ ಶೈಲಿ ಆಹಾರ ಪದ್ಧತಿ ಮದ್ಯ ಮಾದಕ ವಸ್ತುಗಳಿಂದ ದೂರು ಉಳಿಯುವಂತೆ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಡೌನ್ ಸಮಿತಿ ಕಾರ್ಯ ನಿರ್ವಹಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.