ಬೆಳಗಾವಿ: ಮುಳುಗಡೆ ಸಂತ್ರಸ್ತ ರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯಲ್ಲಿ ಅಧಿಕಾರ ದುರ್ಬಳಕೆ
ಮಾಡಿಕೊಂಡ ನೀರಾವರಿ ಇಲಾಖೆಯ ಐವರು ಎಂಜಿನಿಯರ್ಗಳಿಗೆ ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ವಿಶೇಷ ನ್ಯಾಯಾಲಯ ಎರಡು ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ತಲಾ ₹ 70 ಸಾವಿರ ದಂಡ ವಿಧಿಸಿದೆ.
2012ರಲ್ಲಿ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದ ವೃತ್ತ ಕಚೇರಿ (ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ)ಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಆಗಿದ್ದ ಬಿ.ಪದ್ಮನಾಭ, ತಾಂತ್ರಿಕ ಸಹಾಯಕರಾಗಿದ್ದ ಆನಂದ ಮಿರ್ಜಿ, ಕಿರಿಯ ಎಂಜಿನಿಯರ್ ಆಗಿದ್ದ ಶುಭಾ ಟಿ, ಶಿರಸಂಗಿಯ ಉಪವಿಭಾಗ–5ರ ಕಿರಿಯ ಎಂಜಿನಿಯರ್ ಪ್ರಕಾಶ ಹೊಸಮನಿ, ಗದಗ ಜಿಲ್ಲೆಯ ನರಗುಂದದ ಎಂಆರ್ಬಿಸಿ ವಿಭಾಗ–1ರ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದ ಎಂ.ಬಿ.ಕವದಿ ಶಿಕ್ಷೆಗೆ ಒಳಗಾದವರು.
ಈ ಪ್ರಕರಣದ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಪ್ರಭು ಶುಕ್ರವಾರ ಶಿಕ್ಷೆ ಪ್ರಕಟಿಸಿದ್ದಾರೆ.
ಪ್ರಕರಣದ ವಿವರ: ಕಗದಾಳ ಗ್ರಾಮದಲ್ಲಿರುವ ಎಲ್ಲ ಮನೆಗಳು ನೀರಿನಿಂದ ಜವುಗು ಹಿಡಿದಿದ್ದವು. ವಾಸಕ್ಕೆ ಯೋಗ್ಯವಿಲ್ಲದ ಕಾರಣ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ನಡೆದಿತ್ತು. ಇದಕ್ಕಾಗಿ ನಡೆದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕಾಯ್ದೆ ಉಲ್ಲಂಘನೆ ನಡೆದಿದೆ. ಈ ಎಂಜಿನಿ ಯರ್ಗಳುಲಂಚಕೊಟ್ಟವರಿಗೆ ಹೆಚ್ಚಿನ ಪರಿಹಾರ ಒದಗಿಸಿ,ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದುಅದೇ ಗ್ರಾಮದ ಹಣಮಪ್ಪ ಮಾದರ ದೂರು ಸಲ್ಲಿಸಿದ್ದರು.
ಅಂದಿನ ಲೋಕಾಯುಕ್ತಡಿವೈಎಸ್ಪಿಗಳಾದ ಎಚ್.ಜಿ. ಪಾಟೀಲ ಹಾಗೂ ಜಿ.ಆರ್. ಪಾಟೀಲ ತನಿಖೆ ಕೈಗೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರವೀಣ ಅಗಸಗಿ ವಾದ ಮಂಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.