ADVERTISEMENT

ರಾಯಬಾಗ: ಕುಲುಮೆಯಲ್ಲಿ ಅಲೆಮಾರಿಗಳ ಬದುಕು

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 5:52 IST
Last Updated 6 ಜನವರಿ 2025, 5:52 IST
<div class="paragraphs"><p>ರಾಯಬಾಗದಲ್ಲಿ ಬೀಡುಬಿಟ್ಟ ಸಂಚಾರಿ ಕಮ್ಮಾರರು ವೃತ್ತಿಯಲ್ಲಿ ತೊಡಗಿರುವುದು&nbsp; </p></div>

ರಾಯಬಾಗದಲ್ಲಿ ಬೀಡುಬಿಟ್ಟ ಸಂಚಾರಿ ಕಮ್ಮಾರರು ವೃತ್ತಿಯಲ್ಲಿ ತೊಡಗಿರುವುದು 

   

–ಪ್ರಜಾವಾಣಿ ಚಿತ್ರ

ರಾಯಬಾಗ: ಜಾಗತೀಕರಣದ ಪ್ರಭಾವದಿಂದ ಪ್ಲಾಸ್ಟಿಕ್‌ ಬಳಕೆ ವಿಪರೀತವಾಗಿದೆ. ಇದು ನೇರವಾಗಿ ಸಾಂಪ್ರದಾಯಿಕ ಉದ್ಯೋಗಗಳ ಮೇಲೆ ಹೊಡೆ ನೀಡಿದೆ. ಹೀಗೆ ಪೆಟ್ಟು ತಿಂದ ಸಮುದಾಯಗಳಲ್ಲಿ ಅಲೆಮಾರಿ ಕಂಬಾರರೂ ಸೇರಿದ್ದಾರೆ. ಆಧುನಿಕ ಪ್ರಪಂಚ ಇಷ್ಟೆಲ್ಲ ಮುಂದುವರಿದ ಮೇಲೂ ಅಲೆಮಾರಿಗಳ ಬದುಕು ಮಾತ್ರ ಇನ್ನೂ ಅಲೆದಾಡುತ್ತಲೇ ಇದೆ.

ADVERTISEMENT

ಪುರುಷ, ಮಹಿಳೆಯರು, ಮಕ್ಕಳೂ ಶ್ರಮ ಪಟ್ಟು ದುಡಿದರೂ ಒಂದು ಹೊತ್ತಿನ ಹೊಟ್ಟೆ ತುಂಬುವಷ್ಟು ಹಣ ಇವರಿಗೆ ಸಿಗುವುದಿಲ್ಲ. ಮಳೆಗಾಲದಲ್ಲಿ ಇವರಿಗೆ ಕೆಲಸವೇ ಇರುವುದಿಲ್ಲ. ನೆಮ್ಮದಿಯಾಗಿ ಜೀವನ ಕಳೆದದ್ದಕ್ಕಿಂತ ಸಂಕಷ್ಟದಲ್ಲಿ ಬದುಕಿನ ದಿನಗಳನ್ನು ದೂಡಿದ್ದೇ ಹೆಚ್ಚು.

ದುಡಿಮೆಗಾಗಿ ಪಟ್ಟಣದಿಂದ ಪಟ್ಟಣಕ್ಕೆ, ಊರಿನಿಂದ ಊರಿಗೆ ಅಲೆಯುತ್ತಾರೆ. ಒಂದೂರಿನಲ್ಲಿ ಕೆಲವು ದಿನ ಬೀಡುಬಿಟ್ಟ ಬಯಲಲ್ಲೇ ಟೆಂಟ್‌ ಹಾಕಿಕೊಂಡು ಬದುಕುತ್ತಾರೆ. ಮತ್ತೆ ಕೆಲವು ಕುಟುಂಬಗಳು ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುತ್ತವೆ. ಕಮ್ಮಾರ ನೈಜ ಬದುಕಿನ ಚಿತ್ರಣ ಆರಂಭವಾಗುವುದೇ ವಲಸೆ ಮೂಲಕ.

 ಹೌದು...

ಬಯಲು ಕಮ್ಮಾರರು ಈಗ ನಿಜಕ್ಕೂ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇವರ ಶ್ರಮಕ್ಕೆ ತಕ್ಕಂತೆ ಫಲ ಸಿಗದೇ ಇರುವುದರಿಂದ ಊರೂರು ಅಲೆಯುವ ಅನಿವಾರ್ಯ ಇನ್ನೂ ಇದೆ.

ಎಲ್ಲಿಂದಲೋ ಬಂದವರು: ರೈತರ ಅವಶ್ಯಕ ಕಷಿ ಉಪಕರಣಗಳನ್ನು ಶೀಘ್ರದಲ್ಲೇ ಅಚ್ಚುಕಟ್ಟಾಗಿ ತರಾರಿಸಿ ಕೊಡುವ ಸಂಚಾರಿ ಕಮ್ಮಾರರು ಗೇಣು ಹೊಟ್ಟೆಗಾಗಿ ಮಧ್ಯ ಪ್ರದೇಶದ, ಆಂಧ್ರ, ಅಸ್ಸಾಂ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಅಲ್ಲಲ್ಲಿ ತಮ್ಮ ಬಿಡಾರಗಳನ್ನು ಹೂಡಿ ಜೀವನ ಸಾಗಿಸುತ್ತಿದ್ದಾರೆ.

ಪ್ರತಿ ಕ್ಷಣಕ್ಕೂ ಹೋರಾಟದ ಬದುಕು ರೂಢಿಸಿಕೊಂಡಿರುವ ಈ ಕುಟುಂಬಗಳು ಪುರುಷ, ಮಹಿಳೆಯರು ಶ್ರಮಪಟ್ಟು ದುಡಿಯುವ ಹುಮ್ಮಸ್ಸು ಹೊಂದಿದ್ದಾರೆ. ಆದರೂ ಆಧುನಿಕ ಉಪಕರಣಗಳು ಕೃಷಿ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದರಿಂದ ಅಲೆಮಾರಿ ಕಮ್ಮಾರರ ಬದುಕು ಅತಂತ್ರಗೊಂಡಿದೆ.

ಪಟ್ಟಣದ ಬಸ್ ನಿಲ್ದಾಣ, ಚಿಂಚಲಿ ರಸ್ತೆ ಪಕ್ಕ, ಅಂಬೇಡ್ಕರ್‌ ಕಾಲೊನಿಯ ಹತ್ತಿರ ಮಕ್ಕಳು, ಮಹಿಳೆಯರು, ಸಂಸಾರದ ಸಮೇತ ಬಂದು ಪಟ್ಟಣದಲ್ಲಿ ಬೀಡು ಬಿಟ್ಟಿದ್ದಾರೆ. ರೈತ ಸಮೂಹ ತಮ್ಮ ಕೃಷಿ ಕಾರ್ಯಗಳಿಗೆ ಬಳಕೆ ಮಾಡುವ ಕೃಷಿ ಸಲಕರಣೆಗಳನ್ನು ಕಡಿಮೆ ಬೆಲೆಯಲ್ಲಿ ತಯಾರಿಸಿ ಕೋಡುವುದೇ ಇವರ ಕಾಯಕ. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಕೃಷಿ ಕಾರ್ಯಕ್ಕೆ ಬಳಸುವ ಕುಡಗೋಲು, ಕೊಡಲಿ, ಸಲಿಕೆ, ಪಿಕಾಸಿ, ಗುದ್ದಲಿ, ಚಾಕು, ಕೋತಾ ಹೀಗೆ ಹತ್ತು ಹಲವಾರು ಸಲಕರಣೆಗಳುನ್ನು ಮಾರುಕಟ್ಟೆಯ ಬೆಲೆಗಿಂತ ಅಗ್ಗದ ದರದಲ್ಲಿ ತಯಾರಿಸುತ್ತಾರೆ. ಆದರೆ, ಕೆಲಸಕ್ಕೆ ತಕ್ಕಂತೆ ಸರಿಯಾದ ಫಲ ಸಿಗದೇ ಇರುವುದು ವಿಪರ್ಯಾಸ.

ಇತ್ತೀಚಿನ ಆಧುನಿಕ ಅಬ್ಬರದ ಹೊಡೆತಕ್ಕೆ ಸಿಲುಕಿರುವ ಅಲೆಮಾರಿ ಕಮ್ಮಾರರಿಗೆ ಯೋಗ್ಯ ಸೌಲಭ್ಯಗಳೂ ಸಿಗುತ್ತಿಲ್ಲ. ಕಬ್ಬಿಣದ ಕಚ್ಚಾ ಸಾಮಗ್ರಿಗಳಿಗೆ ಅವರು ಪರದಾಡುವುದು ತಪ್ಪಿಲ್ಲ. ಹಳೆಯ ಸಾಮಗ್ರಿಗಳಿಗೆ ಹೊಸ ರೂಪ ನೀಡಿದರೆ ಚಿಲ್ಲರೆ ಹಣ ಸಿಗುತ್ತದೆ. ತುತ್ತು ಅನ್ನಕ್ಕೂ ಪರದಾಡುವುದು ಅನಿವಾರ್ಯವಾಗಿದೆ ಎಂದು ಅಲ್ಕಾ ರೆಂದಾಳೆ ಹೇಳುತ್ತಾರೆ.

ರಾಯಬಾಗದಲ್ಲಿ ಬೀಡುಬಿಟ್ಟ ಸಂಚಾರಿ ಕಮ್ಮಾರರು ವೃತ್ತಿಯಲ್ಲಿ ತೊಡಗಿರುವುದು 

ಪೆನ್ನು ಹಿಡಿಯಬೇಕಾದ ಕೈಯಲ್ಲಿ ಸುತ್ತಿಗೆ

ಅಲೆಮಾರಿ ಕಮ್ಮಾರರ ಜತೆಗೆ ಪುಟಾಣಿ ಮಕ್ಕಳೂ ಸಾಕಷ್ಟು ಇದ್ದಾರೆ. ಶಿಕ್ಷಣ ಪಡೆದು ಭವಿಷ್ಯದ ಪ್ರಜೆಗಳಾಗಬೇಕಾಗಿದ್ದ ಮಕ್ಕಳು ಪಾಲಕರ ಸಂಚಾರಿ ಉದ್ಯೋಗದಿಂದಾಗಿ ಪೆನ್ನಿನ ಬದಲಾಗಿ ಸುತಿಗೆ ಹಿಡಿದು ಅದರಲ್ಲೇ ಭವಿಷ್ಯ ಕಾಣಬೇಕಾಗಿದೆ. ಪಟ್ಟಣದ ರಸ್ತೆಯ ಪಕ್ಕದಲ್ಲೇ ಬೀಡು ಬಿಟ್ಟಿರುವ ಮಹಾರಾಷ್ಟ್ರ ಮೂಲದ ಈ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ದೂರವಾಗಿದೆ. ಅಲ್ಲಿನ ಬಡತನ ನಿರುದ್ಯೋಗ ಬರ ಸ್ವಂತ ಜಮೀನು ಇಲ್ಲದಿರುವುದು ಕೂಲಿ ಕೆಲಸ ದೊರಕದಿರುವುದರಿಂದ ಬಯಲು ಕಮ್ಮಾರರ ಅಲೆದಾಟಕ್ಕೆ ಮೂಲ ಕಾರಣವಾಗಿವೆ.

ಸಣ್ಣಸಣ್ಣ ಮಕ್ಕಳು ವಯೋವೃದ್ಧರು ಸೇರಿದಂತೆ ಇಡೀ ಕುಟುಂಬಗಳ ಜವಾಬ್ದಾರಿ ನಿರ್ವಹಿಸುವುದು ಸಾಮಾನ್ಯವೇನಲ್ಲ. ಆದರೆ ಇವರಿಗೆ ಸರ್ಕಾರದ ಸೌಲಭ್ಯಗಳು ಗಗನ ಕುಸುಮವಾಗಿವೆ. ಇಂಥ ಅಲೆಮಾರಿ ಕುಟುಂಬಗಳಿಗಾಗಿಯೇ ವಿಶೇಷ ಶಾಲೆಗಳನ್ನು ತೆರೆಯುವ ನಿಯಮ ಸರ್ಕಾರದಲ್ಲಿದೆ. ಆದರೆ ಅವು ಇದೂವರೆಗೂ ಎಲ್ಲಿಯೂ ಕಾಣಿಸಿಲ್ಲ. ಇದರಿಂದ ಚಿಣ್ಣರ ಬದುಕು ಕುಲುಮೆಯಲ್ಲಿ ಕರಗುತ್ತಿದೆ.

ಸುತ್ತಿಗೆ ಬಡಿಯುವ ಗಟ್ಟಿಗಿತ್ತಿ ಮಹಿಳೆಯರು

ಮಹಿಳೆಯರು ಮಕ್ಕಳು ಎಂಬ ಭೇದವಿಲ್ಲದೆ ಒಟ್ಟಿಗೆ ಶ್ರಮಪಟ್ಟು ದುಡಿಯುತ್ತಿದ್ದಾರೆ. ಅಲೆಮಾರಿ ಕಮ್ಮಾರ ಕುಟುಂಬದ ಮಹಿಳೆಯರು ಪುರುಷರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಉಟ್ಟ ಬಟ್ಟೆಯನ್ನು ಬಿಗಿಯಾಗಿ ನಡಕ್ಕೆ ಸುತ್ತಿಕೊಂಡು ಬಹುಭಾರದ ಸುತ್ತಿಗೆಯನ್ನು ಮೇಲೆತ್ತಿ ಕಾಯ್ದ ಕಬ್ಬಿಣವನ್ನು ಬಡಿದು ವಸ್ತುವಿನ ರೂಪಕ್ಕೆ ತರುವಲ್ಲಿ ಈ ಗಟ್ಟಿಗಿತ್ತಿ ಮಹಿಳೆಯರ ಶ್ರಮ ಬಹಳಷ್ಟಿದೆ. ಮಕ್ಕಳ ಭವಿಷ್ಯ ನಿರ್ಮಿಸಲು ಸುತ್ತಿಗೆಯನ್ನು ಎತ್ತಿ ಬಡಿಯುವ ಕಾಯಕಕ್ಕೆ ಇವರು ಒಗ್ಗಿಗೊಂಡಿದ್ದಾರೆ.

ಸರ್ಕಾರ ಕಮ್ಮಾರರ ಬದುಕಿಗೆ ಯಾವುದೇ ಸೌಕರ್ಯ ನೀಡಿಲ್ಲ. ಕನಿಷ್ಠ ಅವರ ಮಕ್ಕಳ ಶಿಕ್ಷಣಕ್ಕಾದರೂ ಸಂಚಾರಿ ಟೆಂಟ್‌ಶಾಲೆಗಳ ವ್ಯವಸ್ಥೆ ಮಾಡಬೇಕು
ಶಶಿಧರ ಕರಾಡೆ ಸ್ಥಳೀಯ ನಿವಾಸಿ
ಇಡೀ ದಿನ ಅಲೆದರೂ ಕೆಲವೊಮ್ಮೆ ಬಿಡಿಗಾಸಿನ ಕೆಲಸ ಸಿಗುವುದಿಲ್ಲ. ಕೆಲವು ದಿನಗಳಲ್ಲಿ ಖಾಲಿ ಹೊಟ್ಟೆಯಲ್ಲೇ ಮಲಗಿಕೊಳ್ಳಬೇಕಾದ ಅನಿವಾರ್ಯ ಬರುತ್ತದೆ
ಅಲ್ಕಾ ರೆಂದಾಳೆ  ಕಮ್ಮಾರ ಮಹಿಳೆ
ಅಲೆಮಾರಿ ಕಮ್ಮಾರರಿಗೆ ಸಾಂಪ್ರದಾಯಿಕ ಉದ್ಯೋಗದ ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಅವರ ಬದುಕಿಗೆ ಶಾಶ್ವತ ನೆಲೆ ಮಾಡಿ ಕೊಡಬೇಕು
ಪ್ರವೀಣ ಕಮ್ಮಾರ ಬೆಳಗಾವಿ
ಅಲೆಮಾರಿಗಳ ಬದುಕಿಗಾಗಿ ಸರ್ಕಾರದ ಯೋಜನೆಗಳು ಸಾಕಷ್ಟು ಇವೆ. ಆದರೆ ಅವುಗಳ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸುವ ಪ್ರಚಾರ ಮಾಡುವ ಕೆಲಸ ಮಾಡೆಬೇಕು
ಪುಷ್ಪಲತಾ ಮಠದ ಶಿಕ್ಷಕಿ ಬೆಳಗಾವಿ
ಅಲೆಮಾರಿ ಕಮ್ಮಾರರು ರಾಜ್ಯದಿಂದ ರಾಜ್ಯಕ್ಕೆ ಅಲೆಯುತ್ತಿದ್ದಾರೆ. ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸಿದರೆ ಮಾತ್ರ ಸುಧಾರಣೆ ಸಾಧ್ಯ
ಸುನೀಲ ಕಂಬಾರ ವೃತ್ತಿಪರ ಕಮ್ಮಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.