ADVERTISEMENT

ಬೆಳಗಾವಿ: ಜಲಾಶಯಗಳ ಒಳಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 10:32 IST
Last Updated 17 ಜೂನ್ 2021, 10:32 IST
ಬೆಳಗಾವಿ ‌ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಸಮೀಪದ ಹಿರಣ್ಯಕೇಶಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ
ಬೆಳಗಾವಿ ‌ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಸಮೀಪದ ಹಿರಣ್ಯಕೇಶಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಗುರುವಾರವೂ ಮುಂದುವರಿದಿದೆ.

ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ ಹಾಗೂ ಹಿರಣ್ಯಕೇಶಿ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗತೊಡಗಿದೆ. ನಿಪ್ಪಾಣಿ ತಾಲ್ಲೂಕಿನಲ್ಲಿ ವೇದಗಂಗಾ ನದಿಗೆ ನಿರ್ಮಿಸಿರುವ ಜತ್ರಾಟ–ಭೀವಶಿ, ಅಕ್ಕೋಳ–ಸಿದ್ನಾಳ, ಕಾರದಗಾ–ಬೋಜ ಮತ್ತು ಹುಕ್ಕೇರಿ ತಾಲ್ಲೂಕಿನ ಹಿರಣ್ಯಕೇಶಿ ನದಿಯ ಸಂಕೇಶ್ವರ–ನಾಗನೂರ ಗ್ರಾಮದ ಕೆಳಮಟ್ಟದ ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಪರ್ಯಾಯ ಮಾರ್ಗ ಇರುವುದರಿಂದ ಜನರ ಸಂಚಾರಕ್ಕೆ ತೊಂದರೆಯಾಗಿಲ್ಲ.

ಬುಧವಾರ ರಾತ್ರಿಯಿಂದಲೂ ಜಿಟಿಜಿಟಿ ಮಳೆ ಆಗುತ್ತಿದೆ. ಘಟಪ್ರಭಾ ನದಿಗೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ನಲ್ಲಿ ನಿರ್ಮಿಸಿರುವ ರಾಜಾ ಲಖಮಗೌಡ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. 17,114 ಕ್ಯುಸೆಕ್ ನೀರು ಸೇರುತ್ತಿದೆ. ಬುಧವಾರಕ್ಕೆ ಹೋಲಿಸಿದರೆ ಪ್ರಮಾಣ ದ್ವಿಗುಣವಾಗಿದೆ.

ADVERTISEMENT

ಮಲಪ್ರಭಾ ನದಿಗೆ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ನಿರ್ಮಿಸಿರುವ ಜಲಾಶಯಕ್ಕೆ ಗುರುವಾರ ಒಳಹರಿವು ಆರಂಭವಾಗಿದೆ. 877 ಕ್ಯುಸೆಕ್ ಒಳಹರಿವು ಇತ್ತು. ಸತತ ಮಳೆಯಿಂದಾಗಿ ಅಲ್ಲಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ನಗರದಲ್ಲಿ ಆಗಾಗ ಮಳೆ ಹಾಗೂ ಆಗಾಗ ಬಿಸಿಲಿನ ವಾತಾವರಣ ಇತ್ತು. ವಡಗಾವಿಯ ನಿಜಾಮಿಯಾ ನಗರದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಸಿಪಿಇಡಿ ಮೈದಾನ ಮತ್ತು ಆಟೊನಗರದಲ್ಲಿನ ತಾತ್ಕಾಲಿಕ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಅಂಗಡಿಗಳಿಗೆ ನೀರು ನುಗ್ಗಿ ವಹಿವಾಟಿಗೆ ತೊಡಕಾಯಿತು. ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು.

ಗರಿಷ್ಠ ಮಳೆ (ಸೆಂ.ಮೀ.ಗಳಲ್ಲಿ)

ಬೆಳಗಾವಿ ಜಿಲ್ಲೆ

ಕಣಕುಂಬಿ;20.06

ಅಸೋಗಾ:18.08

ಜಾಂಬೋಟಿ;16.06

ಉಚಗಾಂವ;13.02

ಖಾನಾಪುರ;12.00

ರಾಕಸಕೊಪ್ಪ;10.10

ಸಂತಿಬಸ್ತವಾಡ; 10.06

ಲೋಂಡಾ;10.02

ಬೆಳಗಾವಿ ನಗರ;10.01

ಸದಗಲಾ;10.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.