ಬೆಳಗಾವಿ: ‘ತೋಟಗಾರಿಕೆ ಇಲಾಖೆಯ ಖಾನಾಪುರ ಸಸ್ಯಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ಪ್ರಕರಣ ದಾಖಲಿಸಿ 24 ದಿನ ಕಳೆದರೂ ಬಂಧಿಸಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕರ್ತವ್ಯ ಮರೆತಿದ್ದಾರೆ. ಇದನ್ನು ಖಂಡಿಸಿ ಆ. 15ರಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು’ ಎಂದು ಪ್ರಕರಣ ದಾಖಲಿಸಿದ ಚನ್ನಪಟ್ಟಣ ಮೂಲದ ಯುವತಿ ತಿಳಿಸಿದರು.
‘ಅತ್ಯಾಚಾರ, ಗರ್ಭಪಾತ, ಹಲ್ಲೆ, ಖಾಸಗಿ ವಿಡಿಯೊ ಹರಿಬಿಟ್ಟಿದ್ದು ಸೇರಿದಂತೆ 12 ವಿವಿಧ ಕಲಂ ಅಡಿ ಕೇಸ್ ದಾಖಲಿಸಿದ್ದೇನೆ. ಈಗಾಗಲೇ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ. ತಕ್ಷಣಕ್ಕೆ ಬಂಧಿಸಬೇಕಾದ ಪೊಲೀಸರು ನೆಪ ಹೇಳುತ್ತಿದ್ದಾರೆ. ಇದನ್ನು ಖಂಡಿಸಿ ಬೆಳಗಾವಿಯ ಹಲವು ಮಹಿಳೆಯರೊಂದಿಗೆ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮೌನವಾಗಿ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು’ ಎಂದರು.
‘ಪ್ರತಿಭಟನಾರ್ಥವಾಗಿ ಒಂದು ಖಾಲಿ ಚೆಕ್ ಅನ್ನು ಸಚಿವ ಕಾರಜೋಳ ಅವರಿಗೆ ನೀಡುತ್ತೇನೆ. ಹಣ ಕೊಟ್ಟು ನ್ಯಾಯ ಪಡೆಯಬೇಕೇ ಎಂದು ಅವರೇ ತಿಳಿಸಬೇಕು. ಸ್ವಾತಂತ್ರ್ಯ ಸಮಾರಂಭಕ್ಕೆ ಅಡ್ಡಿಪಡಿಸುವುದು ನನ್ನ ಉದ್ದೇಶವಲ್ಲ. ಆದರೆ, ನ್ಯಾಯವನ್ನು ಎಲ್ಲಿಯಾದರೂ ಕೇಳಬಹುದು. ಆರೋಪಿಯನ್ನು ಜೈಲಿಗಟ್ಟುವವರೆಗೆ ನಾನು ಸುಮ್ಮನಿರುವುದಿಲ್ಲ’ ಎಂದೂ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.