ADVERTISEMENT

ರಾಮ ಮೂರ್ತಿ ಮೆರವಣಿಗೆ: ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌ ಪೀಠ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 16:17 IST
Last Updated 20 ಜನವರಿ 2024, 16:17 IST

ಬೆಳಗಾವಿ: ರಾಮ ಮಂದಿರ ಉದ್ಘಾಟನೆಯ ದಿನವಾದ ಜನವರಿ 22ರಂದು ನಗರದಲ್ಲಿ ಬೃಹತ್‌ ಮೆರವಣಿಗೆ ಮಾಡಲು ಅನುಮತಿ ಕೋರಿ ಶ್ರೀರಾಮ ಸೇನಾ ಹಿಂದೂಸ್ಥಾನ್‌ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಧಾರವಾಡ ಪೀಠ ತಿರಸ್ಕರಿಸಿದೆ.

ಸಂಘಟನೆಯ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್‌ ಅವರು ಮೆರವಣಿಗೆಗೆ ಅನುಮತಿ ಕೋರಿ ನಗರ ಪೊಲೀಸ್‌ ಕಮಿಷನರ್ ಎಸ್‌.ಎನ್‌.ಸಿದ್ರಾಮಪ್ಪ ಅವರಿಗೆ ಮನವಿ ಸಲ್ಲಿಸಿದ್ದರು. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಕಾರಣಕ್ಕೆ ಕಮಿಷನರ್ ಅನುಮತಿ ನೀಡಿರಲಿಲ್ಲ.

ಇದನ್ನು ಪ್ರಶ್ನಿಸಿ ರಮಾಕಾಂತ ಅವರು ಹೈಕೋರ್ಟ್‌ನ ಧಾರವಾಡ ಪೀಠದಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಹೈಕೋರ್ಟ್‌ ಪೀಠವು ನಗರ ಪೊಲೀಸ್‌ ಕಮಿಷನರ್‌ರಿಂದ ಮಾಹಿತಿ ಕೇಳಿತ್ತು. ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಇದ್ದು, ಅಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಿದ ಬಗ್ಗೆ ಪೊಲೀಸ್ ಕಮಿಷನರ್ ವಿವರ ನೀಡಿದ್ದರು. ಇದನ್ನು ಆಧರಿಸಿ ಹೈಕೋರ್ಟ್‌ ಪೀಠ ಕೊಂಡೂಸ್ಕರ್‌ ಅವರ ಅರ್ಜಿ ತಿರಸ್ಕರಿಸಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.