ಬೆಳಗಾವಿ: ತಾಲ್ಲೂಕಿನ ಮುತ್ಯಾನಟ್ಟಿ ಗುಡ್ಡದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಐವರ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತಿಳಿಸಿರುವ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಮತ್ತು ಪೋಕ್ಸೋ ನ್ಯಾಯಾಲಯವು, ಶಿಕ್ಷೆ ಪ್ರಮಾಣವನ್ನು ನ.13 (ಶುಕ್ರವಾರ)ಕ್ಕೆ ಕಾಯ್ದಿರಿಸಿದೆ.
ಮುತ್ಯಾನಟ್ಟಿಯ ಸಂಜು ಸಿದ್ದಪ್ಪ ದಡ್ಡಿ (24), ಸುರೇಶ ಭರಮಪ್ಪ ಬೆಳಗಾವಿ (24), ಸುನೀಲ ಲಗಮಪ್ಪ ಡುಮ್ಮಗೋಳ (21), ಹುಕ್ಕೇರಿ ತಾಲ್ಲೂಕು ಮಣಗುತ್ತಿಯ ಅಂಬೇಡ್ಕರ್ ಗಲ್ಲಿಯ ಮಹೇಶ ಬಾಳಪ್ಪ ಶಿವನ್ನಗೋಳ (23) ಮತ್ತು ಬೈಲಹೊಂಗಲದ ಸೋಮಶೇಖರ ದುರಡುಂಡೇಶ್ವರ ಶಹಾಪುರ (23) ಅಪರಾಧಿಗಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 33 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದೆ.
ಪ್ರಕರಣದ ವಿವರ: ‘ಹಾಸ್ಟೆಲ್ನಲ್ಲಿದ್ದ ಬಾಲಕಿಯು 2017ರ ಫೆ.15ರಂದು ಸ್ನೇಹಿತನೊಂದಿಗೆ ಗುಡ್ಡಕ್ಕೆ ತೆರಳಿ ಅಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಕೃತ್ಯ ನಡೆದಿತ್ತು. ಆರೋಪಿಗಳು ಸೇರಿಕೊಂಡು ಗೆಳೆಯನಿಂದಲೂ ಆಕೆಯ ಮೇಲೆ ಬಲವಂತವಾಗಿ ಸಂಭೋಗ ಮಾಡಿಸಿದ್ದರು. ಅವರ ಬಳಿ ಇದ್ದ ಎರಡು ಮೊಬೈಲ್ ಫೋನ್ಗಳು ಹಾಗೂ ₹ 300 ಕಿತ್ತುಕೊಂಡಿದ್ದರು. ಸಂಭೋಗದ ಭಂಗಿಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು. ಆಕೆಯ ಗೆಳೆಯನನ್ನು ಥಳಿಸಿ, ನಂತರ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಪೊಲೀಸರಿಗೆ ತಿಳಿಸದಂತೆ ಜೀವ ಬೆದರಿಕೆ ಒಡ್ಡಿದ್ದರು. ₹ 20ಸಾವಿರ ತಂದು ಕೊಡಬೇಕು. ಇಲ್ಲವಾದಲ್ಲಿ ಮೊಬೈಲ್ನಲ್ಲಿ ಚಿತ್ರೀಕರಿಸಿರುವ ವಿಡಿಯೊ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಕೊಲ್ಲುತ್ತೇವೆ ಎಂದು ಹೆದರಿಸಿದ್ದರು. ದ್ವಿಚಕ್ರವಾಹನದ ಪೆಟ್ರೋಲ್ ಪೈಪ್ ಕಿತ್ತುಕೊಂಡು ದೌರ್ಜನ್ಯ ನಡೆಸಿದ್ದರು. ರಾತ್ರಿ 9ರವರೆಗೂ ನಮ್ಮನ್ನು ಬಿಡದೆ ಕಾಡಿದರು’ ಎಂಬ ಸಂತ್ರಸ್ತೆ ಹೇಳಿಕೆ ಆಧರಿಸಿ ಕಾಕತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖಾಧಿಕಾರಿ ರಮೇಶ ಬಿ. ಗೋಕಾಕ ನ್ಯಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಆರೋಪ ಸಾಬೀತಾಗಿದೆ ಎಂದು ಆದೇಶಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ವಿ.ಎಲ್. ಪಾಟೀಲ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.