ADVERTISEMENT

Ambedkar Jayanti: ಬೆಳಗಾವಿ ಕಲಾವಿದನ ಬಳಿ ಅಂಬೇಡ್ಕರ್‌ ಅಪರೂಪದ ಚಿತ್ರ ಸಂಗ್ರಹ

ಇಮಾಮ್‌ಹುಸೇನ್‌ ಗೂಡುನವರ
Published 14 ಏಪ್ರಿಲ್ 2025, 3:15 IST
Last Updated 14 ಏಪ್ರಿಲ್ 2025, 3:15 IST
<div class="paragraphs"><p>ದೀಪಕ ಮಧಾಳೆ ಅವರು ಸಂಗ್ರಹಿಸಿದ ಅಂಬೇಡ್ಕರ್‌ ಜೀವನಾಧಾರಿತ ಚಿತ್ರಗಳು </p></div>

ದೀಪಕ ಮಧಾಳೆ ಅವರು ಸಂಗ್ರಹಿಸಿದ ಅಂಬೇಡ್ಕರ್‌ ಜೀವನಾಧಾರಿತ ಚಿತ್ರಗಳು

   

ಪ್ರಜಾವಾಣಿ ಚಿತ್ರ: ಸುನಿಲ್‌ ಗಿರಿ

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ನಿಪ್ಪಾಣಿಯ ಚಿತ್ರ ಕಲಾವಿದ ದೀಪಕ ಮಧಾಳೆ ಅವರ ಬಳಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಜೀವನಗಾಥೆ ಬಿಂಬಿಸುವ ಸಾವಿರಕ್ಕೂ ಅಧಿಕ ಚಿತ್ರಗಳಿವೆ. ಅಂಬೇಡ್ಕರ್‌ ಬದುಕಿನ ಅಪರೂಪದ ಕ್ಷಣಗಳನ್ನು ಸೆರೆ ಹಿಡಿದ ಹಲವು ಕಪ್ಪುಬಿಳುಪಿನ ಚಿತ್ರಗಳು ಅವರ ಬಳಿಯಿವೆ.

ADVERTISEMENT

ವಯಸ್ಸು 60 ವರ್ಷವಾದರೂ ಉತ್ಸಾಹದ ಚಿಲುಮೆಯಂತಿರುವ ದೀಪಕ ಅವರ ಮೇಲೆ ಅಂಬೇಡ್ಕರ್‌ ಪ್ರಭಾವ ಅಪಾರ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಅಂಬೇಡ್ಕರ್‌ ಭೇಟಿ ನೀಡಿದ ಬಹುತೇಕ ಪ್ರದೇಶಗಳಿಗೆ ಅವರು ಭೇಟಿ ನೀಡಿದ್ದಾರೆ. ಎಲ್ಲೆಲ್ಲಿ ಅಪರೂಪದ ಚಿತ್ರಗಳು, ಚಿತ್ರಪಟಗಳು ಸಿಗುತ್ತವೆಯೋ, ಅವುಗಳನ್ನು ಎತ್ತಿಕೊಂಡು ಬಂದು ಒಪ್ಪ ಓರಣವಾಗಿ ಜತನ ಮಾಡಿದ್ದಾರೆ. ಮುಂದಿನ ‍ಪೀಳಿಗೆಗೂ ಅಂಬೇಡ್ಕರ್‌ ಅವರ ನೈಜ ಚಿತ್ರಗಳು ಸಿಗುವಂತೆ ಮಾಡಿದ್ದಾರೆ.

‘ಅಂಬೇಡ್ಕರ್‌ ಜೀವನ ಚರಿತ್ರೆ ಮೂರು ಬಾರಿ ಓದಿದ್ದೇನೆ. ಅದರಲ್ಲಿದ್ದ ಅಂಬೇಡ್ಕರ್‌ ಚಿತ್ರಗಳನ್ನು ಪ್ರಿಂಟ್‌ ಮಾಡಿಸಿ ಸಂಗ್ರಹಿಸಿದೆ. ನಂತರ ಕೊಲ್ಹಾಪುರದಲ್ಲಿ ಪಠಾಣ್‌ ಎಂಬುವರ ಬಳಿ ಅಂಬೇಡ್ಕರ್‌ ಭಾವಚಿತ್ರದ ಮೂಲಪ್ರತಿ (ಒರಿಜಿನಲ್‌) ಸಿಕ್ಕಿತು. ಅದರೊಂದಿಗೆ ವಿವಿಧ ಕೃತಿಗಳು, ಅಂಬೇಡ್ಕರ್‌ ಭೇಟಿ ಕೊಟ್ಟ ಸ್ಥಳಗಳ ಚಿತ್ರಗಳನ್ನೂ ಸಂಗ್ರಹಿಸಿದೆ. ಇದಕ್ಕೆ ಸಹೋದರ ಸಂತಕುಮಾರ ಕೂಡ ನೆರವಾದರು’ ಎಂದು ದೀಪಕ ಮಧಾಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಬೇಡ್ಕರ್ ಅವರು ಬೆಳಗಾವಿ ಮತ್ತು ಹುಬ್ಬಳ್ಳಿಗೆ ಭೇಟಿ ನೀಡಿದ ಕ್ಷಣ

ಅಂಬೇಡ್ಕರ್‌ ಕಾನೂನು ಪದವಿ ಪಡೆದ ಹಂತದಿಂದ ಅಂತ್ಯದವರೆಗಿನ ಕಾಲಘಟ್ಟದ ಚಿತ್ರಗಳಿವೆ. ಚಳವಳಿ, ಸಂಸತ್ತಿನಲ್ಲಿ ಮಾತನಾಡಿದ ಸಂದರ್ಭ, ದೇಶ–ವಿದೇಶದ ಗಣ್ಯರನ್ನು ಭೇಟಿಯಾದ ಕ್ಷಣ ಮತ್ತು ಅವರ ಅಂತ್ಯಕ್ರಿಯೆ ಚಿತ್ರಗಳೂ ಇವೆ.

‘ನಿಪ್ಪಾಣಿಯ ಬಳವಂತ ವರಾಳೆ ಅವರು ಅಂಬೇಡ್ಕರ್‌ ಆಪ್ತರಾಗಿದ್ದರು. ನಮ್ಮೂರಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅಂಬೇಡ್ಕರ್‌, ಬಹಿಷ್ಕೃತ ಹಿತಕಾರಣಿ ಚಳವಳಿ, ಚುನಾವಣೆ ಪ್ರಚಾರ ಮತ್ತಿತರ ಕೆಲಸಕ್ಕಾಗಿ ಐದಾರು ಸಲ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ’ ಎಂದು ವಿವರಿಸಿದರು.

ನಿಪ್ಪಾಣಿಯಲ್ಲಿ ಕುದುರೆ ಏರಿ ಸುತ್ತಾಡಿದ ಅಂಬೇಡ್ಕರ್‌

70 ಪ್ರದರ್ಶನ: ‘ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದ ಅಂಬೇಡ್ಕರ್‌ ಚಿತ್ರಗಳ 22ನೇ ಸಂಪುಟದಲ್ಲೂ ನಾನು ಸಂಗ್ರಹಿಸಿದ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. 1990ರಲ್ಲಿ ನಿಪ್ಪಾಣಿಯಲ್ಲಿ ಮೊದಲ ಸಲ ಪ್ರದರ್ಶನ ಆಯೋಜಿಸಿದ್ದೆ. ಬೆಳಗಾವಿ, ವಿಜಯಪುರ, ಕೊಲ್ಹಾಪುರ, ಸಾಂಗ್ಲಿ, ಗಡಹಿಂಗ್ಲಜ್‌ ಮತ್ತಿತರ ಕಡೆ ಶಾಲೆ–ಕಾಲೇಜುಗಳು ಮತ್ತು ಸಂಘ–ಸಂಸ್ಥೆಗಳ ಆವರಣ ಸೇರಿ ಸುಮಾರು 70 ಪ್ರದರ್ಶನವಾಗಿವೆ’ ಎಂಬುದು ಅವರ ವಿವರ.

‘ಮುಂದಿನ ದಿನಗಳಲ್ಲಿ ಈ ಚಿತ್ರಗಳನ್ನು ಡಿಜಿಟಲೀಕರಣ ಮಾಡಿಸಿ ಮತ್ತು ನಿಗದಿತ ಸ್ಥಳದಲ್ಲಿ ನಿರಂತರವಾಗಿ ಪ್ರದರ್ಶಿಸಲು ಯೋಜಿಸಿದ್ದೇನೆ. ಇದಕ್ಕೆ ರಾಜ್ಯ ಸರ್ಕಾರ ನೆರವಾಗಬೇಕು’ ಎಂದು ಕೋರಿದರು.

ಬೆಳಗಾವಿಯಲ್ಲಿ ನಡೆದ ಪ್ರದರ್ಶನದಲ್ಲಿ ಅಂಬೇಡ್ಕರ್‌ ಚಿತ್ರಗಳನ್ನು ವೀಕ್ಷಿಸಿದ ಜನ

ಅಂಬೇಡ್ಕರ್ ಜೀವನ ಮತ್ತು ಹೋರಾಟದ ಕಿಚ್ಚನ್ನು ಅಂಬೇಡ್ಕರೋತ್ತರ ತಲೆಮಾರಿಗೆ ತಲುಪಿಸುವ ಕಾರ್ಯವನ್ನು ದೀಪಕ ಮಧಾಳೆ ಮಾಡುತ್ತಿದ್ದಾರೆ
ಯಲ್ಲಪ್ಪ ಹಿಮ್ಮಡಿ ಬಂಡಾಯ ಸಾಹಿತಿ
ಯುವಜನರಿಗೆ ಅಂಬೇಡ್ಕರ್‌ ಅವರನ್ನು ಪರಿಚಯಿಸುವುದು ನನ್ನ ಉದ್ದೇಶ. ಈಗಲೂ ಮನೆಗೆ ಬಂದರೂ ಚಿತ್ರಗಳನ್ನು ತೋರಿಸುತ್ತೇನೆ. ಪ್ರದರ್ಶನಕ್ಕೂ ಸಿದ್ಧ
ದೀಪಕ ಮಧಾಳೆ ಚಿತ್ರ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.